ಹೊಸದಿಗಂತ ವರದಿ ಹಾಸನ:
ಪತ್ರಕರ್ತ ಮಂಜು ಬನವಾಸೆ ಹಾಗೂ ಹೆತ್ತೂರು ನಾಗರಾಜ್ ಎಂಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಸೈಬರ್ ಕ್ರೈಂ ಕಥಾ ಹಂದರ ಆಧರಿತ ‘ದಿ ಡಾರ್ಕ್ ವೆಬ್’ ಚಲನಚಿತ್ರದ ಶೀರ್ಷಿಕೆಯನ್ನು ನಾಯಕ ನಟ ವಸಿಷ್ಠ ಸಿಂಹ ಹಾಸನದ ಪ್ರವಾಸಿ ಮಂದಿರದಲ್ಲಿ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ನಮ್ಮೂರಿನ ಪತ್ರಕರ್ತರೆಲ್ಲ ಸೇರಿ ʼದಿ ಡಾರ್ಕ್ ವೆಬ್ʼ ಸಿನಿಮಾ ನಿರ್ಮಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಸಂತೋಷ ಹೆಚ್ಚಾಗಿದೆ.
‘ಜನನಿ ಜನ್ಮಭೂಮಿಶ್ಚ್ ಸ್ವರ್ಗಾದಪಿ ಗರಿಯಸಿ’ ಎಂಬ ಮಾತಿನಂತೆ ನಮ್ಮೂರು ಎಂದರೆ ಬರುವ ಭಾವನೆಯೇ ಬೇರೆ. ನನ್ನೂರು ಹಾಸನ ಎನ್ನುವುದು ನಂಗೆ ಹೆಮ್ಮೆ. ಈಗ ಇಲ್ಲಿಯೂ ಸಾಕಷ್ಟು ಜನರು ಚಿತ್ರೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚಾಗಬೇಕು ಎಂದರು.
ʼದಿ ಡಾರ್ಕ್ ವೆಬ್ʼ ಸಿನಿಮಾ ಸೈಬರ್ ಕ್ರೈಮ್ ಆಧಾರಿಸಿದ ಕತೆ ಹೊಂದಿದೆ. ಇಂದು ಹೊಸ ಥರದ ಅಪರಾಧಗಳು ನಡೆಯುತ್ತಿವೆ. ಅಂತಹ ಕೃತ್ಯಗಳ ಮೇಲೆ ಬೆಳಕು ಚೆಲ್ಲುವ ಯತ್ನ ಈ ಚಿತ್ರತಂಡದಿಂದ ಆಗಿದೆ. ಚಿತ್ರಕ್ಕೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು.
ಚಿತ್ರದ ನಿರ್ಮಾಪಕ ಮಂಜು ಬನವಾಸೆ ಮಾತನಾಡಿ, ಹಾಸನ ಉತ್ಸಾಹಿ ಪತ್ರಕರ್ತರು ಒಂದು ತಂಡವಾಗಿ ಚಿತ್ರ ನಿರ್ಮಾಣ ಮಾಡಿದ್ದೇವೆ. ನಮ್ಮ ಸಣ್ಣ ಪ್ರಯತ್ನಕ್ಕೆ ವಸಿಷ್ಠ ಸಿಂಹ ಅವರಂತಹ ದೊಡ್ಡ ನಟರ ಬೆಂಬಲ ದೊರಕಿರುವುದು ಸುಯೋಗ ಎಂದರು.
ಚಿತ್ರದ ನಿರ್ಮಾಪಕ ಹೆತ್ತೂರು ನಾಗರಾಜ್, ನಾಯಕ ನಟ ಚೇತನ್, ಪೋಷಕ ನಟರಾದ ಮಂಜೇಗೌಡ, ಭಾರತೀಶ್, ದಿಗ್ವಿಜಯ ನಾಗರಾಜ್, ಪ್ರಶಾಂತ್, ಹಿರಿಯ ಪತ್ರಕರ್ತರಾದ ಬಾಳ್ಳು ಗೋಪಾಲ್, ಉದಯ್ ಕುಮಾರ್, ರವಿ ನಾಕಲಗೂಡು, ಖುಷ್ವಂತ್, ವೈದ್ಯ ಡಾ.ಸಂತೋಷ್, ವಕೀಲರಾದ ಲಕ್ಷ್ಮಿ ಕಾಂತ್, ಹಾಗೂ ಜಾರ್ಜ್ ವಿಲ್ಸನ್, ನಲ್ಲಪ್ಪ, ಸೇರಿದಂತೆ ಚಲನಚಿತ್ರ ತಂಡ ಹಾಗೂ ಆತ್ಮೀಯರು ಉಪಸ್ಥಿತರಿದ್ದರು.