ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಚುನಾವಣಾ ಅಖಾಡಕ್ಕೆ ಸಿನಿ ತಾರೆಯರು ಇಳಿದಿದ್ದು ತಮ್ಮ ಮೆಚ್ಚಿನ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಈಗಾಗಲೇ ಸುದೀಪ್ ಸಿಎಂ ಬೊಮ್ಮಾಯಿ ಪರ ಪ್ರಚಾರ ಮಾಡಿದ್ದೂ, ಇದೀಗ ನಟಿ ರಮ್ಯಾ ರಾಜಕೀಯಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ.
ಈ ಹಿಂದೆ ಸಂಸದೆಯಾಗಿ ಆ ನಂತರ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ (Social Media) ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿದ ರಮ್ಯಾ 2019 ರ ಚುನಾವಣೆ ಬಳಿಕ ಕಾಂಗ್ರೆಸ್ (Congress) ಹಾಗೂ ಒಟ್ಟಾರೆ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ ಇದೀಗ ಮತ್ತೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದು, ಈ ವಿಧಾನಸಭೆ ಚುನಾವಣೆಯಲ್ಲಿ ತಾರಾ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಇದರ ನಡುವೆ ಇಂಗ್ಲೀಷ್ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಮ್ಯಾ, ತಮಗೆ ಕರ್ನಾಟಕದ ಮೂರು ಪ್ರಮುಖ ಪಕ್ಷಗಳಿಂದ ಆಫರ್ ಬಂದಿತ್ತು ಎಂಬ ಗುಟ್ಟು ರಟ್ಟು ಮಾಡಿದ್ದಾರೆ.
ಕಾಂಗ್ರೆಸ್ಗೆ ಸ್ಟಾರ್ ಪ್ರಚಾರಕಿ ಮಾತ್ರವಲ್ಲ ಕಾಂಗ್ರೆಸ್ ರಮ್ಯಾಗೆ ಟಿಕೆಟ್ ಸಹ ಆಫರ್ ಮಾಡಿತ್ತು ಅಲ್ಲದೆ ಬರೋಬ್ಬರಿ ಆರು ಕ್ಷೇತ್ರದ ಆಯ್ಕೆಯನ್ನು ನೀಡಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿತ್ತೆಂದು ಸ್ವತಃ ರಮ್ಯಾ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಾತ್ರವೇ ಅಲ್ಲದೆ ಬಿಜೆಪಿಯಿಂದಲೂ ಟಾಪ್ ಹಂತದ ವ್ಯಕ್ತಿಯೇ ನೇರವಾಗಿ ನನ್ನ ಬಳಿ ಮಾತನಾಡಿ ಪಕ್ಷಕ್ಕೆ ಆಹ್ವಾನಿಸಿದರು.
ಅದೇ ರೀತಿ ಜೆಡಿಎಸ್ ಪಕ್ಷದಿಂದಲೂ ಆಫರ್ ಬಂದಿತ್ತು ಎಂದಿರುವ ರಮ್ಯಾ, ಕುಮಾರಸ್ವಾಮಿ ಹಾಗೂ ನಾನೂ ಆಕಸ್ಮಿಕವಾಗಿ ಸೆಲೂನ್ ಒಂದರಲ್ಲಿ ಭೇಟಿಯಾದೆವು. ಪ್ರೀತಿಯಿಂದ ಮಾತನಾಡಿದ ಕುಮಾರಸ್ವಾಮಿ ಅವರು ರಾಜಕೀಯದ ಬಗ್ಗೆ ಮಾತನಾಡುತ್ತಾ, ನೀವು ರಾಜಕೀಯದಿಂದ ದೂರ ಇರಬಾರದು, ನಿಮಗೆ ಶಕ್ತಿ ಇದೆ, ಬುದ್ಧಿ ಇದೆ ನೀವು ಹೀಗೆ ಸುಮ್ಮನೆ ಕೂರುವುದು ಸರಿಯಲ್ಲ ಎಂಬಿತ್ಯಾದಿ ಮಾತುಗಳನ್ನು ಆಡಿದರು ಎಂದು ಹೇಳಿದ್ದಾರೆ.
ಹಠಾತ್ತನೆ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲು ಕಾರಣವೇನು? ಎಂಬುದಕ್ಕೆ ಉತ್ತರಿಸಿದ ರಮ್ಯಾ, ನಾನು ಕಾಂಗ್ರೆಸ್ನಿಂದ ದೂರಾಗಿಲ್ಲ. ಕೆಲವು ವಿಷಯಗಳ ಬಗ್ಗೆ ಕೆಲವು ನಾಯಕರ ನಿರ್ದಿಷ್ಟ ಹೇಳಿಕೆಗಳ ಬಗ್ಗೆ ಅಂತೃಪ್ತಿ ವ್ಯಕ್ತಪಡಿಸಿದ್ದೆ ಅಷ್ಟೆ. ಅಲ್ಲದೆ ಈ ಬಾರಿ ಕೆಸಿ ವೇಣುಗೋಪಾಲ್ ಹಾಗೂ ಸುರ್ಜೆವಾಲಾ ಅವರುಗಳು ನನ್ನನ್ನು ಸಂಪರ್ಕಿಸಿ ಪ್ರಚಾರ ಮಾಡುವಂತೆ ಕೇಳಿದರು. ನಾನು ಸಹ ಒಪ್ಪಿಕೊಂಡೆ. ಪ್ರಚಾರ ಮಾಡಿ ಯಾರನ್ನಾದರೂ ಗೆಲ್ಲಿಸಲು ಸಾಧ್ಯವಾಯಿತೆಂದರೆ ಅದು ನನ್ನ ಪರವಾಗಿ ಮಾಡಿದ ಸೇವೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.