ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಆಶ್ರಮದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿರುವ ಆರೋಪ ವಿಶಾಖಪಟ್ಟಣಂನ ಜ್ಞಾನಾನಂದ ಆಶ್ರಮದ ಆಡಳಿತಾಧಿಕಾರಿ ಸ್ವಾಮಿ ಪೂರ್ಣಾನಂದ ಸರಸ್ವತಿ ಅವರ ಮೇಲಿದ್ದು, ಸೋಮವಾರ ತಡರಾತ್ರಿ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದಾರೆ .
ನನ್ನ ಮೇಲೆ ಸ್ವಾಮೀಜಿ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಚಿತ್ರ ಹಿಂಸೆ ನೀಡಿದ್ದಾರೆ’ ಎಂದು ಸಂತ್ರಸ್ತ ಹುಡುಗಿದಿಶಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಈ ಸಂಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು, ವಿಶಾಖಪಟ್ಟಣಂನ ಜ್ಞಾನಾನಂದ ಆಶ್ರಮದ ಆಡಳಿತಾಧಿಕಾರಿ ಸ್ವಾಮಿ ಪೂರ್ಣಾನಂದ ಸರಸ್ವತಿ ಅವರನ್ನು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ .
ಹಲವಾರು ತಿಂಗಳುಗಳಿಂದ ಅನಾಥ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ವಿಜಯವಾಡದಲ್ಲಿ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.
ಬಾಲಕಿ 2016 ರಿಂದ ಆಶ್ರಮದಲ್ಲಿ ವಾಸಿಸುತ್ತಿದ್ದಳು ಎಂದು ಹೇಳಲಾಗಿದ್ದು, ಜೂನ್ 13 ರಂದು ನಾಪತ್ತೆಯಾಗಿದ್ದಳು ಎಂದು ವರದಿಯಾಗಿದೆ. ಅಲ್ಲದೆ, ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡು ಜೂನ್ 15 ರಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು ಎಂದೂ ತಿಳಿದುಬಂದಿದೆ. ಇನ್ನು, ಬಾಲಕಿ ಈ ತಿಂಗಳು ಆಶ್ರಮದಿಂದ ತಪ್ಪಿಸಿಕೊಂಡು ವಿಜಯವಾಡಕ್ಕೆ ತಲುಪಿ ಅಲ್ಲಿ ದೂರು ದಾಖಲಿಸಿದ್ದಾಳೆ ಎಂದೂ ವರದಿಯಾಗಿದೆ.
2012 ರಲ್ಲಿ ಸಹ ಇದೇ ಸ್ವಾಮೀಜಿ ವಿರುದ್ಧ ಮತ್ತೊಬ್ಬಳು ಅಪ್ರಾಪ್ತೆ ಸಹ ಅತ್ಯಾಚಾರದ ಬಗ್ಗೆ ದೂರು ನೀಡಿದ್ದಳು. ಆ ಪ್ರಕರಣದ ದೂರು ಸಹ ವಿಚಾರಣೆಯ ಹಂತದಲ್ಲಿದೆ ಎಂದು ಆಂಧ್ರಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಅತ್ಯಾಚಾರ ಪ್ರಕರಣ ನಡೆಯುತ್ತಿದ್ದರೂ, ಅದೇ ಆಶ್ರಮದಲ್ಲಿ ಮಕ್ಕಳು ಹೇಗೆ ಇದ್ದರು ಮತ್ತು ಮಕ್ಕಳನ್ನು ಇರಿಸಿಕೊಳ್ಳಲು ಆ ಆಶ್ರಮ ಪರವಾನಗಿ ಹೊಂದಿತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಶ್ರಮದಲ್ಲಿ 12 ಮಕ್ಕಳು ವಾಸಿಸುತ್ತಿದ್ದು, ಅವರಲ್ಲಿ ನಾಲ್ವರು ಹೆಣ್ಣು ಮಕ್ಕಳು ಎಂದು ತಿಳಿದುಬಂದಿದೆ.
ಸ್ವಾಮಿ ಪೂರ್ಣಾನಂದ, 64 ವರ್ಷದ ಅವಿವಾಹಿತ ವ್ಯಕ್ತಿಯಾಗಿದ್ದು, ಇವರು ಡಬಲ್ ಸ್ನಾತಕೋತ್ತರ ಪದವಿ, ಬಿ.ಎಡ್., ಮತ್ತು ಕಾನೂನು ಪದವಿಗಳನ್ನು ಪಡೆದಿದ್ದಾರೆ. ಇವರ ವಿರುದ್ಧ ಅತ್ಯಾಚಾರ ಕೇಸ್ ಮಾತ್ರವಲ್ಲದೆ ಇತರೆ ಹಲವು ಪ್ರಕರಣಗಳಿವೆ ಎಂದೂ ತಿಳಿದುಬಂದಿದೆ.