ಹೊಸದಿಗಂತ ವರದಿ ಹುಬ್ಬಳ್ಳಿ:
ಆರ್ಥಿಕ ಶೋಷಣೆ, ಅಸಮಾನತೆ ಕಡಿಮೆ ಆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ವಿಚಾರ ಡಾ. ಅಂಬೇಡ್ಕರ್ ವ್ಯಕ್ತಪಡಿಸಿದ್ದರು ಎಂದು ಶಾಸಕ ಸಾಬಣ್ಣ ತಳವಾರ ಹೇಳಿದರು.
ನಗರದ ಆರ್ ಎಸ್ ಎಸ್ ಕಚೇರಿ ಕೇಶವಕುಂಜ ಸಭಾಂಗಣದಲ್ಲಿ ಲೋಕಹಿತ ಟ್ರಸ್ಟ್ ಹಾಗೂ ಸಾಮರಸ್ಯ ವೇದಿಕೆಯಿಂದ ನಡೆದ ಡಾ. ಅಂಬೇಡ್ಕರ್ ವಿಚಾರ ಸಂಕಿರಣದಲ್ಲಿ ಅಂಬೇಡ್ಕರ್ ಆರ್ಥಿಕ ಚಿಂತನೆ ಕುರಿತು ಅವರು ಮಾತನಾಡಿದರು.
ಕೆಲವೇ ಜನರ ಕೈಯಲ್ಲಿ ಅಧಿಕಾರ, ಬಡತನ, ಅಸಮಾನತೆ ದೇಶದ ಆರ್ಥಿಕ ಕುಂಟಿತಕ್ಕೆ ಕಾರಣವಾಗಿತ್ತು. ವಾರಸುದಾರಿಕೆ ಪದ್ಧತಿಯಿಂದ ವೆಚ್ಚ ಹೆಚ್ಚಾಗಿ ಆದಾಯ ಕಡಿಮೆಯಾಗುತ್ತಿತ್ತು. ರೈತರಿಗೆ ಅತೀ ಅವಶ್ಯವಾದದ್ದು ಬೀಜ, ಗೊಬ್ಬರ, ಸಲಕರಣೆ ಹಾಗೂ ಆರ್ಥಿಕ ವ್ಯವಸ್ಥೆ. ಬಡ್ಡಿ ಪ್ರಮಾಣ ಹೆಚ್ಚಿರುವ ಖಾಸಗಿ ಸಾಲದಿಂದ ಕೃಷಿಕರ ಆರ್ಥಿಕ ದುರ್ಬಲತೆಗೆ ಕಾರಣ ಎಂದು ಡಾ. ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರು.
ನೀರಿನ ವಿಷಯದಲ್ಲಿ ಅಸ್ಪರ್ಶ್ಯತೆ ಅನುಭವಿಸಿದ್ದ ಅಂಬೇಡ್ಕರ್ ಮುಂದೆ ಭಾರತದ ಜಲಸಂಪನ್ಮೂಲ ಸಚಿವರಾಗುತ್ತಾರೆ. ದಾಮೋದರ ಕಣಿವೆ ಯೋಜನೆ ಮೂಲಕ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ದೇಶದ ಉತ್ತರ ಹಾಗೂ ದಕ್ಷಿಣದ ನದಿಗಳ ಜೋಡಣೆಯಾಗಬೇಕೆಂದು ಪ್ರತಿಪಾದಿಸಿದ್ದರು.
ಬ್ರಿಟಿಷ್ ಇಂಡಿಯಾದ ಆರ್ಥಿಕ ವ್ಯವಸ್ಥೆ ಕುರಿತು ಅಧ್ಯಯಿಸಿದ್ದ ಅಂಬೇಡ್ಕರ್, ಬ್ರಿಟಿಷರ ದೋಚನೆಯಿಂದ ಭಾರತದಲ್ಲಿ ಬಡತನ ಉದ್ಭವಿಸಿದೆ ಎಂದು ಮನಗಂಡರು. ಸರ್ಕಾರದಿಂದ ಉದ್ಯಮಗಳಿಗೆ ಹೂಡಿಕೆಯಾಗಬೇಕು. ಕೇಂದ್ರ, ರಾಜ್ಯ, ಸ್ಥಳೀಯ ಆಡಳಿತಕ್ಕೆ ಸಮರ್ಪಕ ಹಣ ಪೂರೈಕೆಯಾಗಬೇಕು. ಜಾತಿ ಆಧಾರಿತ ಉದ್ಯೋಗದಿಂದ ಶ್ರಮ ವಿಭಜನೆ ಬದಲು ಶ್ರಮಿಕರ ವಿಭಜನೆ ಆದದ್ದು ದುರ್ದೈವ. ಉದ್ಯಮಶೀಲತೆ ಹಾಗೂ ಕೌಶಲ್ಯ ಎಲ್ಲರ ಸ್ವತ್ತಾಗಬೇಕೆಂಬ ವಿಚಾರ ಅಂಬೇಡ್ಕರ್ ಹೊಂದಿದ್ದರು. ಭಾರತದ ರಿಸರ್ವ ಬ್ಯಾಂಕ್ ಸ್ಥಾಪನೆಯಲ್ಲೂ ಅಂಬೇಡ್ಕರ್ ಅವರ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.
ಡಾ. ಎಸ್. ಆರ್. ರಾಮನಗೌಡರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.