ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಮುಲ್ ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುವ ನಿರ್ಧಾರ ದುರದೃಷ್ಟಕರ. ಇದು ನಮ್ಮ ರಾಜ್ಯ ಬ್ರಾಂಡ್ ಆವಿನ್ ಹಿತಾಸಕ್ತಿಗೆ ಹಾನಿಕರ ಮತ್ತು ಸಹಕಾರಿ ಸಂಸ್ಥೆಗಳ ನಡುವೆ ಅನಾರೋಗ್ಯಕರ ಸ್ಪರ್ಧೆಯನ್ನು ಉಂಟುಮಾಡುತ್ತದೆ. ಆದ್ದರಿಂದ ತಮಿಳುನಾಡಿನಲ್ಲಿ ಅಮುಲ್ ಹಾಲು ಸಂಗ್ರಹ ಮಾಡುವುದನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ಸ್ಟಾಲಿನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ತಮಿಳುನಾಡಿನಲ್ಲಿ ಡೈರಿ ಸಹಕಾರಿ ಸಂಸ್ಥೆಯು 1981 ರಿಂದ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಹಾಲು ಉತ್ಪಾದಕರು ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸಹಕಾರಿ ಸಂಸ್ಥೆಗಳು ನಡೆದುಕೊಳ್ಳುತ್ತಿವೆ. ಅದ್ದರಿಂದ ಆವಿನ್ಗೆ ನಮ್ಮ ಅಗ್ರಸ್ಥಾನ ನೀಡುತ್ತೇವೆ. ಆವಿನ್ ಸಹಕಾರಿ ವ್ಯಾಪ್ತಿಯಡಿಯಲ್ಲಿ 9,673 ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇತ್ತೀಚೆಗೆ ಅಮುಲ್ ಕೃಷ್ಣಗಿರಿ ಜಿಲ್ಲೆಯಲ್ಲಿ ಹಾಲು ಸಂಗ್ರಹಣಾ ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಬಹು ರಾಜ್ಯ ಸಹಕಾರಿ ಪರವಾನಗಿಯನ್ನು ಬಳಸಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅಮುಲ್ನ ಈ ಕ್ರಮವು ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಗ್ರಹಣೆ ಹಾಗೂ ಮಾರಾಟದಲ್ಲಿ ತೊಡಗಿರುವ ಸಹಕಾರಿ ಸಂಸ್ಥೆಗಳ ನಡುವೆ ಅನಗತ್ಯ ಸ್ಪರ್ಧೆ ಸೃಷ್ಟಿಸುತ್ತದೆ. ಆದ್ದರಿಂದ ಅಮುಲ್ನ ಹಸ್ತಕ್ಷೇಪವನ್ನು ನಿಲ್ಲಿಸುವಂತೆ ನಿರ್ದೇಶಿಸಲು ತುರ್ತು ಮಧ್ಯಸ್ಥಿಕೆಗೆ ಅಮಿತ್ ಶಾ ಅವರಿಗೆ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.