ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರು ಹೊರ ವಲಯದ ಆನೇಕಲ್ನಲ್ಲಿ ದುಷ್ಕರ್ಮಿಯೊಬ್ಬ ವಕೀಲರ ಬೆನ್ನಿಗೆ ಚಾಕು ಇರಿದು ಪರಾರಿ ಆಗಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ಆನೇಕಲ್ ಪೊಲೀಸ್ ಠಾಣೆ ಸಮೀಪವೇ ಘಟನೆ ನಡೆದಿದೆ. ವಕೀಲ ಮಂಜುನಾಥ್ (30) ಹಲ್ಲೆಗೊಳಗಾದವರಾಗಿದ್ದಾರೆ.
ವಕೀಲರು ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಆರೋಪಿ ಬೆನ್ನಿಗೆ ಮತ್ತು ಕೈಗೆ ಚಾಕುವಿನಿಂದ ಹಲ್ಲೆ ಚುಚ್ಚಿ ಹಲ್ಲೆ ಮಾಡಿದ್ದಾನೆ. ಇನ್ನು ವಕೀಲರ ಬೆನ್ನಿಗೆ ಮೂರುಬಾರಿ ಚಾಕುವಿನಿಂದ ಇರಿಯಲಾಗಿದೆ. ಬೆನ್ನಿಗೆ ಮೂರು ಬಾರಿ ಇರಿದ ನಂತರ ತಪ್ಪಿಸಿಕೊಳ್ಳಲು ಕೈ ಅಡ್ಡ ಹಿಡಿದಾಗ ಕೈಗೂ ಚಾಕುವಿನಿಂದ ಕೊಯ್ದಿದ್ದಾನೆ ಎಂದು ತಿಳಿದುಬಂದಿದೆ.
ತೀವ್ರ ಗಾಯಗೊಂಡ ವಕೀಲ ಮಂಜುನಾಥ್ ಅವರ ನೆರವಿಗೆ ಧಾವಿಸಿದ ಆಟೋ ಡ್ರೈವರ್ ಮೇಲೆ ಹಲ್ಲೆಗೆ ಯತ್ನ ಮಾಡಲಾಗಿದೆ. ಚಾಕುವಿನಿಂದ ಆಟೋ ಡ್ರೈವರ್ ಮೇಲೆ ಹಲ್ಲೆಗೆ ಯತ್ನ ಮಾಡಿದ್ದು, ಈ ವೇಳೆ ಆಟೋ ಚಾಲಕ ಹಲ್ಲೆಯಿಂದ ತಪ್ಪಿಸಿಕೊಂಡಿದ್ದಾನೆ. ನಂತರ ಸ್ಥಳೀಯರೆಲ್ಲರೂ ಸೇರಿಕೊಂಡು ಚಾಕುವಿನಿಂದ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ನಂತರ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಜೊತೆಗೆ, ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಗಾಯಾಳುವಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.