ಹೊಸದಿಗಂತ ವರದಿ, ಶಿರಸಿ:
ಅನಂತಕುಮಾರ್ ಹೆಗಡೆ ಸಂಸ್ಕೃತಿ ಇಲ್ಲದ ವ್ಯಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಬನವಾಸಿಯ ಕದಂಬೋತ್ಸವದ ಉದ್ಘಾಟನೆಗೆ ಆಗಮಿಸಿದ ವೇಳೆ ಮಾತನಾಡಿದರು ಅವರು, ರಾಜ್ಯದ, ಕ್ಷೇತ್ರದ ಅಭಿವೃದ್ಧಿ ಮಾಡುವವರು ಈಗ ಮಾತನಾಡುತ್ತಿಲ್ಲ. ಭಾವನಾತ್ಮಕವಾಗಿ ಮಾತನಾಡುವವರು ಹೇಳಿಕೆ ನೀಡುತ್ತಿದ್ದಾರೆ. ಅನಂತ್ ಕುಮಾರ್ ಹೆಗಡೆಗೆ ಸಂಸ್ಕೃತಿ ಇಲ್ಲ. ನನ್ನನ್ನ ಟಾರ್ಗೆಟ್ ಮಾಡಿದಾಗ ಹಿಂದುತ್ವ ಬರುತ್ತದೆ. ನಾಲ್ಕು ವರ್ಷದಿಂದ ಅನಂತ್ ಕುಮಾರ್ ಎಲ್ಲಿ ಹೋಗಿದ್ದರು ? ಅಂತವರನ್ನ ನೀವೇ ಆಯ್ಕೆ ಮಾಡಿದ್ದೀರಿ. ಅಭಿವೃದ್ಧಿ ಕೆಲಸ ಜನರ ಕೆಲಸ ಮಾಡದ ವ್ಯಕ್ತಿ ಎಂದು ಆರೋಪಿಸಿದರು.
ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲಿ ಬಿಜೆಪಿ ಕಾರ್ಯಕತರು ಮಂಡ್ಯದಲ್ಲಿ ಪಾಕ್ ಪರ ಘೋಷಣೆ ಕೂಗಿದಾಗ ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಸಿದ್ದರು. ಆದರೆ ನಾವು ಬಿಜೆಪಿ ಕಾರ್ಯಕರ್ತರನ್ನೂ ಬಂಧಿಸಿದ್ದೇವೆ. ವಿಧಾನ ಸೌಧದಲ್ಲಿ ಘೋಷಣೆ ಕೂಗಿದವರನ್ನೂ ಬಂಧಿಸಿದ್ದೇವೆ. ಎಂದು ತಿರುಗೇಟು ನೀಡಿದರು.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಸಂಬಂಧಿಸಿ ಪೊಲೀಸರು, ಸಿಸಿಬಿ, ಎನ್.ಐ.ಎ. ತನಿಖೆ ನಡೆಸುತ್ತಿದೆ. ಈಗ ಐವರ ಬಂಧನ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಸರಿಯಾದ ಮಾಹಿತಿಯಿಲ್ಲ. ಯಾರನ್ನು ಬಂಧಿಸಲಾಗಿದೆ ಎಂದು ತಿಳಿದಿಲ್ಲ ಎಂದರು.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಚರ್ಚೆ ಮಾಡಿಲ್ಲ. ಆದರೆ ಕಾಂಗ್ರೆಸ್ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬಂದರೆ ಹೆಬ್ಬಾರ್ ಗೆ ಸ್ವಾಗತ ಎಂದ ಸಿಎಂ ಸಿದ್ಧರಾಮಯ್ಯ, ಈ ಹಿಂದೆ ಹೆಬ್ಬಾರ್ ಕಾಂಗ್ರೆಸ್ ನಲ್ಲಿದ್ದರು. ನಂತರ ಬಿಜೆಪಿ ಹೋಗಿದ್ದಾರೆ. ಈಗ ಬಿಜೆಪಿಯಲ್ಲಿ ಬೇಸರ ಆಗಿದೆ ಎನ್ನುತ್ತಿದ್ದಾರೆ. ಕಾರಣ ಏನಾಗುತ್ತದೆ ಎಂದು ನೋಡೋಣ ಎಂದರು.
ಈ ಸಂದರ್ಭದಲ್ಲಿ ಸಚಿವ ಮಂಕಾಳು ವೈದ್ಯ, ಶಾಸಕರಾದ ಆರ್.ವಿ.ದೇಶಪಾಂಡೆ, ಸತೀಶ ಸೈಲ್, ಭೀಮಣ್ಣ ನಾಯ್ಕ ಇದ್ದರು.