ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದಾಗಿನಿಂದಲೂ ಗ್ಯಾರೆಂಟಿಗಳು ಯಾವಾಗ ಜಾರಿಯಾಗುತ್ತವೆ ಎನ್ನುವ ಪ್ರಶ್ನೆ ಮತದಾರರದ್ದು. ಅಂತೆಯೇ ಐದು ಗ್ಯಾರೆಂಟಿಯಲ್ಲಿ ಈಗಾಗಲೇ ಒಂದು ಗ್ಯಾರೆಂಟಿಯನ್ನು ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದೆ.
ಒಂದು ತಿಂಗಳಿಗೆ ಪ್ರತೀ ಮನೆಗೆ 10 ಕೆ.ಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಸದ್ಯಕ್ಕೆ ಸರ್ಕಾರಕ್ಕೆ ಭಾರೀ ತಲೆನೋವಾಗಿದೆ. ಅಕ್ಕಿ ನೀಡಲು ಸಾಧ್ಯವಾಗಿಲ್ಲದಕ್ಕೆ ಸರ್ಕಾರ ಕೇಂದ್ರವನ್ನು ಹೊಣೆ ಮಾಡಿದೆ, ಜೊತೆಗೆ ಪರ್ಯಾಯ ವ್ಯವಸ್ಥೆಯನ್ನೂ ಮಾಡುತ್ತಿದೆ.
ರಾಜ್ಯ ಸರ್ಕಾರ ಇತರರ ರಾಜ್ಯಗಳಿಂದ ಅಕ್ಕಿ ಖರೀದಿಗೆ ಮುಂದಾಗುತ್ತಿದೆ. ಈಗಾಗಲೇ ರಾಜ್ಯದ ಆಹಾರ ಇಲಾಖೆ ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಸಾಕಷ್ಟು ರಾಜ್ಯಗಳಿಗೆ ಕರೆ ಮಾಡಿದ್ದು, ಅಕ್ಕಿ ಖರೀದಿ ಬಗ್ಗೆ ಮಾತನಾಡಲಾಗಿದೆ.
ಅಕ್ಕಿಯ ದರ, ಟ್ರಾನ್ಸ್ಪೋರ್ಟೇಷನ್ ಸಮಯ ಮತ್ತು ಹಣ, ಅಕ್ಕಿಯ ಗುಣಮಟ್ಟದ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ರಿಪೋರ್ಟ್ ನೀಡಲಾಗಿದೆ.
ಈ ಬಗ್ಗೆ ವಿಪಕ್ಷ ಬಿಜೆಪಿ ಗರಂ ಆಗಿದ್ದು, ನಮ್ಮ ರಾಜ್ಯದಲ್ಲಿಯೇ ಹೇರಳವಾಗಿ ಅಕ್ಕಿ, ರಾಗಿ, ಜೋಳ ಬೆಳೆಯುತ್ತಾರೆ. ನಮ್ಮ ರೈತರ ಬಳಿಯೇ ಅಕ್ಕಿ ಖರೀದಿಸಿದರೆ ಅವರಿಗೂ ಲಾಭ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಈ ಬಗ್ಗೆ ಇಂದು ಸ್ಪಷ್ಟ ಚಿತ್ರಣ ಕಾಣುವ ನಿರೀಕ್ಷೆ ಇದೆ.