ಹೊಸದಿಗಂತ ವರದಿ ಪುತ್ತೂರು:
ಪಿಎಂಶ್ರೀ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಉತ್ತಮ ಸಾಧನೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಗೊಂಡ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಜುಲೈ 29 ರಂದು ಅಖಿಲ ಭಾರತೀಯ ಮಂಡಪಮ್ ನವದೆಹಲಿ ಭಾರತೀಯ ಶಿಕ್ಷಾ ಸಮಾಗಮದಲ್ಲಿ ಭಾರತ ಸರಕಾರ ಕೇಂದ್ರ ಶಿಕ್ಷಣ ಸಚಿವಾಲಯದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅತ್ಯುತ್ತಮ ಪಿಎಂಶ್ರೀ ಶಾಲೆಯೆಂದು ದೇಶಕ್ಕೆ ಸಮರ್ಪಣೆ ಮಾಡಿದರು.
ಕೇಂದ್ರ ಸಹಾಯಕ ಶಿಕ್ಷಣ ಸಚಿವ ಡಾ. ಸುಕಾಂತ್ ಮಜೂಂಬ್ದಾರ್, ಭಾರತ ಸರಕಾರ ರಾಜ್ಯ ಶಿಕ್ಷಣ ಸಚಿವ (ಸ್ವತಂತ್ರ ಖಾತೆ ಎಂ ಎಸ್ ಡಿ ಇ)ಜಯಂತ್ ಚೌಧರಿ, ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಇವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಲೆಯಲ್ಲಿ ನೇರ ವೀಕ್ಷಣೆ ಮಾಡಲು ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಪುತ್ತೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ, ಲೋಕೇಶ್ ಎಸ್.ಆರ್., ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಸಹಾಯಕ ಉಪಯೋಜನಾ ಸಮನ್ವಯಾಧಿಕಾರಿ ಶೋಭಾ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ನರಿಮೊಗರು ಸಿಆರ್ ಪಿ ಪರಮೇಶ್ವರಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ತಾರಾನಾಥ ಪಿ ಕಾರ್ಯಕ್ರಮ ಸಂಯೋಜಿಸಿದರು.
ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಶ್ರೀಲತಾ, ಹೇಮಾವತಿ, ಕವಿತಾ, ಶಿಲ್ಪರಾಣಿ, ಸೌಮ್ಯ, ಸವಿತಾ, ಸಂಚನಾ, ಹಿಮತ್, ನಾರಾಯಣ ಆಚಾರ್ಯ, ಎಸ್ ಡಿಎಂಸಿ ಅಧ್ತಕ್ಷ ರವಿಚಂದ್ರ ಮತ್ತು ಎಸ್ ಡಿಎಂಸಿ ಸರ್ವ ಸದಸ್ಯರು ಅಡುಗೆ ಸಿಬ್ಬಂದಿಗಳು ಸಹಕರಿಸಿದರು. ಪೋಷಕರು ಊರವರು ನೇರ ವೀಕ್ಷಣೆ ಮಾಡಿದರು.
ಪ್ರತಿ ಜಿಲ್ಲೆಯಿಂದ ತಲಾ ಒಂದರಂತೆ ಅತ್ಯುತ್ತಮ
ವಿವಿಧ ಆಯಾಮಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ NEP ಚಟುವಟಿಕೆಗಳನ್ನು ಆಯೋಜಿಸಿದ ಕರ್ನಾಟಕದ 35 ಪಿಎಂಶ್ರೀ ಶಾಲೆಗಳನ್ನು NCERT ನವದೆಹಲಿಯಿಂದ ಪ್ರಕಟಿಸಲಾಗಿತ್ತು. ಪಿಎಂಶ್ರೀ ಶಾಲೆ ವೀರಮಂಗಲ ಅತ್ಯುತ್ತಮ ಎಸ್ ಡಿಎಂಸಿ ಯೆಂದು ಪುಷ್ಠಿ ಕಾರ್ಯಕ್ರಮದಡಿ ಕರ್ನಾಟಕ ಸರ್ಕಾರ ಸಮಗ್ರ ಶಿಕ್ಷಣ ಕರ್ನಾಟಕ ರೂ.1 ಲಕ್ಷ ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಿತ್ತು. ಇದೀಗ ಭಾರತ ಸರ್ಕಾರ ಅತ್ಯುತ್ತಮ ಪಿಎಂಶ್ರೀ ಶಾಲೆಯೆಂದು ಪ್ರಶಸ್ತಿ ನೀಡಿದೆ.
ಶಾಲೆಯಲ್ಲಿ ಅತ್ಯುತ್ತಮವಾದ ಕಲಿಕಾ ವಾತವರಣ ನಿರ್ಮಾಣ ಮಾಡಲು ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಇಲಾಖಾಧಿಕಾರಿಗಳ ನಿರ್ದೇಶನ, ಎಸ್ ಡಿಎಂಸಿಯವರ ಸಹಕಾರ , ಪೋಷಕರ ಪಾಲ್ಗೊಳ್ಳುವಿಕೆ, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಶಾಲಾ ಮುಖ್ಯ ಗುರುಗಳಾದ ತಾರಾನಾಥ ಪಿ. ಹೇಳಿದ್ದಾರೆ.