ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಉತ್ತರಕಾಶಿಯ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ ಕಾರ್ಯ ನಡೆಯುತ್ತಿದ್ದು, ಇದೀಗ ಸುರಂಗದಿಂದ 15 ಜನ ಕಾರ್ಮಿಕನನ್ನು ಹೊರಗೆ ಕರೆತರಲಾಗಿದೆ. ಇದರೊಂದಿಗೆ ಪವಾಡ ಸದೃಶ ರೀತಿಯಲ್ಲಿ ಕಾರ್ಮಿಕರು ಹೊರಬರುತ್ತಿದ್ದಾರೆ.
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಹಾಗೂ ಅಧಿಕಾರಿಗಳು ಕಾರ್ಮಿಕರನ್ನು ಬರಮಾಡಿಕೊಳ್ಳುತ್ತಿದ್ದಾರೆ.
ಚಾರ್ಧಾಮ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸಿಲ್ಕ್ಯಾರಾ ಸುರಂಗದಲ್ಲಿ ನವೆಂಬರ್ 12ರಂದು ಭೂಕುಸಿತ ಉಂಟಾಗಿತ್ತು. ಈ ಸಂದರ್ಭದಲ್ಲಿ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಅಂದಿನಿಂದ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿತ್ತು. ಭೂಮಿ ಕೊರೆಯುವ ಯಂತ್ರಗಳು ಹಲವು ಬಾರಿ ಕೆಟ್ಟು ನಿಂತಿತ್ತು. ಇದರಿಂದಾಗಿ ಮನುಷ್ಯ ಸಾಮರ್ಥ್ಯದಿಂದಲೇ ಭೂಮಿ ಕೊರೆಯುವ ಕಾರ್ಯ ನಡೆಸಲಾಗಿತ್ತು. ಸುಮಾರು 60 ಮೀಟರ್ ಕೊರೆಯಲಾಗಿದ್ದು, ಇಂದು ಅಂತಿಮವಾಗಿ ಸುರಂಗದೊಳಗೆ ಪೈಪ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.ಅವಶೇಷಗಳ ದಾಟಿ ಯಶಸ್ವಿಯಾಗಿ ಪೈಪ್ ಒಳಹೋಗಿದೆ. ಮನುಷ್ಯ ಸಾಮರ್ಥ್ಯದಿಂದಲೇ ಕೊರೆದಿರುವುದರಿಂದ ಪೈಪ್ ಸುರಂಗದ ಒಳಗೆ ಹೋಗಿದೆ. ಕಾರ್ಮಿಕರನ್ನು ಹೊರ ಬರಲು ಅನುಮತಿಸುವ ಮೊದಲು ಪೈಪ್ಗಳನ್ನು ಪದೇ ಪದೇ ಪರಿಶೀಲಿಸಲಾಯಿತು. ನಂತರ ಎಲ್ಲ ಕಾರ್ಮಿಕರನ್ನು ಹೊರತೆಗೆಯುವ ಕಾರ್ಯ ಶುರುವಾಗಿದೆ.
ಕಾರ್ಮಿಕರ ರಕ್ಷಣೆಗೆ ಕ್ಷಣಗಣನೆ ಶುರುವಾದ ಕೂಡಲೇ ಸ್ಥಳದಲ್ಲಿ ಆಯಂಬುಲೆನ್ಸ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಸುರಂಗದೊಳಗೆ ಪ್ರಾಥಮಿಕ ಆರೈಕೆಗಾಗಿ ಹಾಸಿಗೆಗಳು, ಕುರ್ಚಿಗಳನ್ನು ಸಿದ್ಧಪಡಿಸಲಾಗಿತ್ತು. ಸುರಂಗದಿಂದ ಹೊರಬಂದ ಕೂಡಲೇ ಎಲ್ಲರನ್ನೂ ಆಯಂಬುಲೆನ್ಸ್ಗಳಿಗೆ ಸಾಗಿಸಲಾಗುತ್ತದೆ. ಕಾರ್ಮಿಕರನ್ನು ಈ ರಸ್ತೆಗಳ ಮೂಲಕ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲು ಮಾರ್ಗದ ರಸ್ತೆಗಳನ್ನು ದುರಸ್ತಿ ಮಾಡಿ ಸಿದ್ಥಪಡಿಸಲಾಗಿದೆ.
ಕಾರ್ಮಿಕರ ಕುಟುಂಬಸ್ಥರು, ಸಂಬಂಧಿಕರು ಸ್ಥಳದಲ್ಲೇ ದಿನಗಳನ್ನು ಕಳೆದು ತಮ್ಮವರು ಹೊರಬರುವುದನ್ನೇ ಎದುರು ನೋಡುತ್ತಿದ್ದರು. ಈ ವೇಳೆ, ಸಂಬಂಧಿಕ ಮಹಿಳೆಯೊಬ್ಬರು ಮಾತನಾಡಿ, ಸುರಂಗದಿಂದ ರಕ್ಷಣೆ ಮಾಡಲಾಗುತ್ತದೆ ಎಂದು ಕೇಳಿ ನನಗೆ ಸಂತೋಷವಾಗಿದೆ. ಆದರೆ, ನನ್ನ ಕಣ್ಣುಗಳ ಮುಂದೆ ಅವರನ್ನು ನೋಡಿದಾಗ ಹೆಚ್ಚು ಸಂತೋಷವಾಗುತ್ತದೆ ಎಂದು ಹೇಳಿದರು.