ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಸರ ಸಂರಕ್ಷಣಾ ಕಾನೂನುಗಳ ಸಮರ್ಪಕ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಬುಧವಾರ ಕಿಡಿಕಾರಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ವಾಯು ಗುಣಮಟ್ಟ ಕುಸಿದು ವಾಯುಮಾಲೀನ್ಯ ಹೆಚ್ಚಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಪರಿಸರ ಕಾನೂನುಗಳು ಹಲ್ಲು ರಹಿತವಾಗಿದ್ದು, ದಂಡವನ್ನು ಸರಿಯಾಗಿ ಜಾರಿಗೊಳಿಸಲಾಗುತ್ತಿಲ್ಲ ಎಂದು ಹೇಳಿದೆ.
ಪ್ರಮುಖವಾಗಿ ಬೆಳೆಗಳ ಅವಶೇಷಗಳ ಸುಡುವಿಕೆಗೆ ದಂಡವನ್ನು ವಿಧಿಸುವ ಸಿಎಕ್ಯೂಎಂ ಕಾಯಿದೆಯಡಿಯಲ್ಲಿ ನಿಬಂಧನೆಯನ್ನು ಜಾರಿಗೊಳಿಸಲಾಗುತ್ತಿಲ್ಲ ಎಂದು ಹೇಳಿದೆ. ರಾಜಧಾನಿ ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳ ಕಾಯಿದೆ 2021 (ಸಿಎಕ್ಯೂಎಂ ಆಕ್ಟ್) ನಲ್ಲಿ ವಾಯು ಗುಣಮಟ್ಟ ನಿರ್ವಹಣೆಗಾಗಿ ಆಯೋಗವು ಗಾಳಿ ಮಾಲಿನ್ಯವನ್ನು ನಿಗ್ರಹಿಸುವ ನಿಬಂಧನೆಯನ್ನು ಜಾರಿಗೆ ತರಲು ಅಗತ್ಯವಾದ ಯಂತ್ರೋಪಕರಣಗಳನ್ನು ರಚಿಸದೆ ಜಾರಿಗೊಳಿಸಲಾಗಿದೆ ಎಂದು ಹೇಳಿದೆ.