ಹೊಸದಿಗಂತ ವರದಿ, ಯಲ್ಲಾಪುರ:
ಉತ್ತರಕನ್ನಡ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಯ ವಿವಿಧ ದೇವಸ್ಥಾನದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಕಳೆದ ನ.18 ರಂದು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಾಲೂಕಿನ ಮಂಚಿಕೇರಿ ಗ್ರಾಮದ ಶ್ರೀ ಮಹಾಗಜಲಕ್ಷ್ಮೀ ದೇವಸ್ಥಾನದ ಬಾಗಿಲ ಬೀಗವನ್ನು ಮುರಿದು, ದೇವಸ್ಥಾನದ ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಸುಮಾರು ಮೂರು ಸಾವಿರ ರೂಪಾಯಿ ಕಾಣಿಕೆ ಹಣ ಹಾಗೂ ಸುಮಾರು ಹತ್ತು ಸಾವಿರ ರೂಪಾಯಿ ಬೆಲೆ ಬಾಳುವ ದೊಡ್ಡದಾದ ಎರಡು ಹಿತ್ತಾಳೆಯ ಗಂಟೆಗಳು ಹಾಗೂ ಸುಮಾರು ಇಪ್ಪತ್ತು ಸಾವಿರ ರೂಪಾಯಿ ಬೆಲೆ ಬಾಳುವ ಒಂದು ತಾಮ್ರದ ಕಡಾಯಿ ಹಾಗೂ ಹತ್ತು ಸಾವಿರ ಬೆಲೆ ಬಾಳುವ ಡಿ.ವಿ.ಆರ್ ಹಾಗೂ ಗುಳ್ಳಾಪುರ ಗ್ರಾಮದ ಶ್ರೀ ಶಿವವ್ಯಾಳೇಶ್ವರ ದೇವಸ್ಥಾನದಲ್ಲಿದ್ದ ಸುಮಾರು 13500/- ರೂ ಬೆಲೆಯ ದೇವಸ್ಥಾನದ ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಎನ್ ಅವರ ಆದೇಶದಂತೆ ಈ ಎರಡೂ ಪ್ರಕರಣದಲ್ಲಿ ಆರೋಪಿತರ ಪತ್ತೆ ಕುರಿತು ವಿಶೇಷ ತಂಡ ರಚಿಸಿದ್ದ ಯಲ್ಲಾಪುರ ಪೊಲೀಸರು, ವೃತ್ತಿಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕನಾದ ಹಾವೇರಿ ಜಿಲ್ಲೆಯ ಲಿಂಗದೇವರಕೊಪ್ಪ ಗ್ರಾಮದ ವಸಂತಕುಮಾರ ಶಿವಪ್ಪ ತಂಬಾಕದ ಹಾಗೂ ರಾಣಿಬೆನ್ನೂರ ತಾಲೂಕಿನ ಗುಡ್ಡದಬೇವಿನಹಳ್ಳಿಯ ಸಲೀಮ ಜಮಾಲಸಾಬ ಕಮ್ಮಾರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರು, ಆರೋಪಿತರು ಈವರೆಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಅಂಕೋಲಾ, ಶಿರಸಿ ಗ್ರಾಮೀಣ, ಬನವಾಸಿ ಕಡೆಗಳಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯ ನಗರ, ರಿಪ್ಪನಪೇಟೆ, ಹೊಸನಗರ ಮತ್ತು ಹಾವೇರಿ ಜಿಲ್ಲೆಯ ಹಂಸಭಾವಿ, ಹಿರೇಕೆರೂರ, ಹಾವೇರಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಗಳಲ್ಲಿ ದೇವಸ್ಥಾನ ಕಳ್ಳತನ ಮಾಡಿ ಬಂಗಾರ ಮತ್ತು ಬೆಳ್ಳಿಯ ವಸ್ತುಗಳು, ಕಾಣಿಕೆ ಹುಂಡಿ, ಘಂಟೆಗಳು, ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳನ್ನು, ಹಾಗೂ ಸಿ.ಸಿ.ಟಿವಿಯ ಡಿ.ವಿ.ಆರ್ ಗಳನ್ನು ಕಳ್ಳತನ ಮಾಡಿದ ಬಗ್ಗೆ ತಿಳಿದು ಬಂದಿರುತ್ತದೆ. ಆರೋಪಿತರು ಕಳೆದ 3-4 ವರ್ಷಗಳಿಂದ ಈ ರೀತಿಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಎಲ್ಲಿಯೂ ಸಿಕ್ಕಿಬಿದ್ದಿರುವುದಿಲ್ಲ. ಶೋಕಿ ಜೀವನಕ್ಕಾಗಿ ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದಾಗಿ ಆರೋಪಿತರು ಹೇಳಿದ್ದಾರೆ.
ಆರೋಪಿತದಿಂದ ಮೂರು ಜಿಲ್ಲೆಯಲ್ಲಿ ಒಟ್ಟೂ 18 ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, ಕೃತ್ಯಕ್ಕೆ ಬಳಸಿದ 12 ಲಕ್ಷ ಮೌಲ್ಯದ ನೂತನ ಮಾರುತಿ ನೆಕ್ಸಾ ಕಾರು, ಬಜಾಜ್ ಪ್ಲಾಟಿನಾ ಬೈಕ್, 2.29 ಲಕ್ಷ ನಗದು ಹಣ, 9ಗ್ರಾಂ ತೂಕದ ದೇವರ ಬಂಗಾರದ ಆಭರಣಗಳು, 3 ಕೆ.ಜಿ 400 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, 140 ಘಂಟೆಗಳು, 27 ಹಿತ್ತಾಳೆಯ ದೀಪದ ಶಮೆ, 22 ಹಿತ್ತಾಳೆಯ ತೂಗು ದೀಪಗಳು, 7 ತಾಮ್ರದ ಕೊಡಗಳು, ಇನ್ನಿತರೇ 35 ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಾಗ್ರಿಗಳು ಹಾಗೂ 1 ಡಿ.ವಿ.ಆರ್. ಸೇರಿದಂತೆ ಒಟ್ಟೂ 19.20 ಲಕ್ಷ ಬೆಲೆಯ ಸ್ವತ್ತನ್ನು ವಶಪಡಿಸಕೊಂಡಿದ್ದಾರೆ.
ಎಸ್.ಪಿ. ವಿಷ್ಣುವರ್ಧನ್ ಎನ್, ಹೆಚ್ಚುವರಿ ಪೊಲೀಸ ಅಧೀಕ್ಷಕ ಸಿ.ಟಿ.ಜಯಕುಮಾರ, ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ, ಸಿಪಿಐ ಸುರೇಶ ಯಳ್ಳೂರ ನೇತೃತ್ವದಲ್ಲಿ, ಪಿ.ಎಸ್.ಐಗಳಾದ ಮಂಜುನಾಥ ಗೌಡರ್, ಅಮೀನಸಾಬ್ ಅತ್ತಾರ, ಶ್ಯಾಮ ಪಾವಸ್ಕರ್, ಪ್ರೊ. ಪಿ.ಎಸ್.ಐ ಉದಯ ಹಾಗೂ ಸಿಬ್ಬಂದಿಗಳಾದ ದೀಪಕ್ ನಾಯ್ಕ, ಬಸವರಾಜ ಹಗರಿ, ಮಹ್ಮದ ಶಫೀ, ಗಜಾನನ ನಾಯ್ಕ, ಪರಶುರಾಮ ಕಾಳೆ, ಪ್ರವೀಣ ಪೂಜಾರ, ಗಿರೀಶ, ನಂದೀಶ, ಹಾಗೂ ಮಹಿಳಾ ಸಿಬ್ಬಂದಿ ಶೋಭಾ ನಾಯ್ಕ, ಹಾಗೂ ಸಿ.ಡಿ.ಆರ್ ಸೆಲ್ ವಿಭಾಗದ ಉದಯ, ರಮೇಶ ಹಾಗೂ ಹಾವೇರಿ ಜಿಲ್ಲೆಯ ಹಂಸಭಾವಿ ಪೊಲೀಸ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಮನೋಹರ ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ