ಹೊಸದಿಗಂತ ವರದಿ ಮಡಿಕೇರಿ:
ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯೊಬ್ಬರನ್ನು ಆಸ್ಪತ್ರಗೆ ಸಾಗಿಸುವಾಗ ಆಂಬ್ಯುಲೆನ್ಸ್’ನಲ್ಲೇ ಮಗುವಿಗೆ ಜನ್ಮ ನೀಡಿದ ಪ್ರಕರಣ ಸೋಮವಾರಪೇಟೆ ಸಮೀಪದ ಬಾಣಾವರದಲ್ಲಿ ನಡೆದಿದೆ. ಬಾಣಾವರದ ನಿವಾಸಿ ಬೇಬಿ ಎಂಬವರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಸಂದರ್ಭ ಅವರನ್ನು ಆಂಬ್ಯುಲೆನ್ಸ್’ನಲ್ಲಿ ಬಾಣಾವರದಿಂದ ಅಬ್ಬೂರುಕಟ್ಟೆಗೆ ಅರಣ್ಯದ ಹಾದಿಯಲ್ಲಿ ಕರೆದೊಯ್ಯಲಾಗುತಿತ್ತು.
ಅರಣ್ಯ ಮಾರ್ಗದಲ್ಲಿ ಬೇಬಿ ಅವರ ಪರಿಸ್ಥಿತಿಯನ್ನು ಗಮನಿಸಿದ ಆಂಬ್ಯುಲೆನ್ಸ್’ನಲ್ಲಿದ್ದ ಸ್ಟಾಫ್ ನರ್ಸ್ ಮಮತಾ ಹಾಗೂ ಚಾಲಕ ಅರುಣ್ ಕುಮಾರ್, ತಕ್ಷಣ ವಾಹನವನ್ನು ನಿಲ್ಲಿಸಿ ಕಾಡಿನ ಹಾದಿಯ ನಡುವೆಯೇ ವಾಹನದಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ಇದೀಗ ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಅವರನ್ನು ಸೋಮವಾರಪೇಟೆಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.