ಹೊಸದಿಗಂತ ವರದಿ, ಚಿತ್ರದುರ್ಗ
ನಾನು ಶಾಸಕನಾಗಿ ಒಂದು ಚರಂಡಿ, ರಸ್ತೆ, ಶಾಲೆ ಮಾಡಲಾಗುತ್ತಿಲ್ಲ ಎಂದು ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಮೊಳಕಾಲ್ಮುರು ತಾಲ್ಲೂಕಿನ ಕಣಕುಪ್ಪೆ ಬಳಿ ನೂತನವಾಗಿ ಸ್ಥಾಪಿಸಿರುವ ಟೂಲ್ಸ್ ಫ್ಯಾಬ್ರಿಕ್ ಕಂಪನಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈ ಕಂಪನಿಯವರು ಆರಂಭದಲ್ಲಿ ಇಲ್ಲಿಗೆ ಬಂದು ಕಂಪನಿ ಆರಂಭಿಸುವ ಕುರಿತು ಸಿದ್ಧತೆ ನಡೆಸಿದ್ದರು. ಇದನ್ನು ಗಮನಿಸಿದ ನಾನು, ಇವರಿಗೇನು ಮೂರ್ಖತನವೇ? ಇವರೇಕೆ ಇಲ್ಲಿ ಕಂಪನಿ ಸ್ಥಾಪಿಸುತ್ತಿದ್ದಾರೆ? ಶಾಸಕನಾಗಿ ನಾನೇ ಕೆಲಸ ಮಾಡಲು ಆಗುತ್ತಿಲ್ಲ ಎಂದು ಶಾಸಕರು ಮಾತನಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಕೇವಲ ಗ್ಯಾರಂಟಿಗಳ ಹೆಸರಿನಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ತಾನೇ ಘೋಷಿಸಿದ ಗ್ಯಾರಂಟಿಗಳಿಗೆ ಹಣ ಹೊಂದಿಸುವಲ್ಲಿ ಐರಾಣಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸಲು ಅನುದಾನ ದೊರೆಯುತ್ತಿಲ್ಲ ಎಂದು ಕಾಂಗ್ರೇಸ್ ಪಕ್ಷದ ಕೆಲವು ಶಾಸಕರು ಅನೇಕ ಬಾರಿ ಅಳಲು ತೋಡಿಕೊಂಡಿದ್ದೂ ಉಂಟು.
ಅಲ್ಲದೇ ಕಳೆದ ಒಂದೆರಡು ದಿನಗಳ ಹಿಂದೆ ಮತ್ತದೇ ಕಾಂಗ್ರೇಸ್ ಪಕ್ಷದ ಶಾಸಕರೊಬ್ಬರು ಬಡವರಿಗೆ ಮನೆಗಳನ್ನು ನೀಡುವಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದರು. ಇದು ಕಾಂಗ್ರೇಸ್ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನುದಾನದ ಕೊರತೆಯ ಕೂಗಿಗೆ ಪುಷ್ಟಿ ನೀಡುವಂತಿದೆ. ಈಗ ಶಾಸಕ ಗೋಪಾಲಕೃಷ್ಣ ಹೇಳಿರುವ ಮಾತು ಕಾಂಗ್ರೇಸ್ ಪಕ್ಷದ ದುರಾಡಳಿತಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.