ಹೊಸದಿಗಂತ ಹುಬ್ಬಳ್ಳಿ:
ನಗರದ ಪ್ರತಿಷ್ಠಿತ ಕೆಎಂಸಿಆರ್ಐ (ಕಿಮ್ಸ್) ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಎದುರೇ ಸಾರ್ವಜನಿಕವಾಗಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದಿದ್ದ ಏಳು ಜನ ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಡಿಸೆಂಬರ್ 31ರಂದು ಹಳೆಹುಬ್ಬಳ್ಳಿಯ ಇಬ್ರಾಹಿಂಪುರದ ಖಾಲಿ ಜಾಗದಲ್ಲಿ ಸಯ್ಯದಸಾಬ್ ಹುಲಮನಿ ಹಾಗೂ ಹಸನ್ ನಾಯಕ ಎಂಬುವವರು ಸ್ನೇಹಿತರೊಂದಿಗೆ ಮದ್ಯಸೇವನೆ ಮಾಡುತ್ತಿದ್ದರು. ಈ ವೇಳೆ ಸಣ್ಣ ವಿಷಯಕ್ಕೆ ಶುರುವಾದ ಕಿರಿಕ್ ದೊಡ್ಡದಾಗಿ, ಹಸನ್ ತನ್ನ ಸ್ನೇಹಿತರೊಂದಿಗೆ ಸೇರಿ ಸಯ್ಯದಸಾಬ್ ಕೈಗೆ ಚಾಕುವಿನಿಂದ ಇರಿದಿದ್ದ.
ಗಾಯಗೊಂಡ ಸಯ್ಯದಸಾಬ್ ಅವರು ವೈದ್ಯಕೀಯ ಕಾನೂನು ಪ್ರಮಾಣಪತ್ರ ಪಡೆಯಲು ಕೆಎಂಸಿಆರ್ಐ ಆಸ್ಪತ್ರೆಗೆ ಬಂದಿದ್ದರು. ವಿಷಯ ತಿಳಿದ ಹಸನ್ ನಾಯಕ ಮತ್ತು ಆತನ ಗ್ಯಾಂಗ್, ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಕೌಂಟರ್ ಎದುರೇ ಮತ್ತೆ ಸಯ್ಯದಸಾಬ್ ಮೇಲೆ ಚಾಕುವಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡು ಈ ಕೆಳಗಿನ ಏಳು ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ:
ಸೋನು ಪಠಾಣ್ (21)
ಅಬ್ದುಲ್ ಪಠಾಣ್ (23)
ಹಸನ್ ನಾಯಕ (21)
ಅಲ್ತಾಫ್ ಧಾರವಾಡ (22)
ಮಲ್ಲಿಕಾರ್ಜುನ ತಾಡಪತ್ರಿ (19)
ಖಾಜಾ ಮೈನುದ್ದೀನ್ ದದೇಸೂರ (20)
ಇಬ್ರಾಹಿಂ ಅಜಾನ್ ಸೌದಾಗರ್ (19)
ಈ ಕುರಿತು ಹುಬ್ಬಳ್ಳಿಯ ಕಸಬಾ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.



