ಹೊಸದಿಗಂತ ವರದಿ,ಕುಶಾಲನಗರ:
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ದುಬಾರೆ ಮೀಸಲು ಅರಣ್ಯದಲ್ಲಿ ಎರಡು ಕಾಡುಕೋಣಗಳನ್ನು ಹತ್ಯೆ ಮಾಡಿ ಮಾಂಸ ಮಾಡುವ ಯತ್ನದಲ್ಲಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ.
ಬಂಧಿತರನ್ನು ಸಿದ್ದಾಪುರ ಕೂಡುಗದ್ದೆಯ ಕುಂಞಿಕುಟ್ಟಿ ಎಂಬವರ ಪುತ್ರ ಕೆ.ಅಸ್ಗರ್ ಹಾಗೂ ಹೈಸ್ಕೂಲ್ ಪೈಸಾರಿಯ ಹೆಚ್.ಪಿ.ರವಿ ಅವರ ಪುತ್ರ ಹೆಚ್.ಆರ್. ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ದುಬಾರೆ ಮೀಸಲು ಅರಣ್ಯದ ಮಾಲ್ದಾರೆ ಶಾಖೆಯ ಘಟ್ಟದಳ್ಳ ಬಳಿ ಮಾ. 26ರಂದು ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳಿಗೆ ಗುಂಡಿನ ಶಬ್ಧ ಕೇಳಿಸಿದ್ದು, ಜಾಗೃತಗೊಂಡ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಎರಡು ಕಾಡುಕೋಣಗಳನ್ನು ಹತ್ಯೆ ಮಾಡಿ ಮಾಂಸವನ್ನಾಗಿ ಮಾಡುವ ಪ್ರಯತ್ನದಲ್ಲಿದ್ದುದು ಗೋಚರಿಸಿದೆ. ಆದರೆ ಈ ಸಂದರ್ಭ ಅರಣ್ಯ ಸಿಬ್ಬಂದಿಗಳನ್ನು ಕಂಡ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಈ ಸಂಬಂಧ ಕುಶಾಲನಗರ ವಲಯ ಅರಣ್ಯಾಧಿಕಾರಿಗಳು ಪ್ರಕರಣ (WLOR-08/2024-25 ದಿನಾಂಕ 28-03-2025) ದಾಖಲಿಸಿಕೊಂಡಿದ್ದರು.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಬಿ. ಹಾಗೂ ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ ಅವರ ಮಾರ್ಗದರ್ಶನದಲ್ಲಿ ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಿದ ಕುಶಾಲನಗರ ವಲಯದ ಅರಣ್ಯಾಧಿಕಾರಿ ರತನ್ ಕುಮಾರ್, ಮಾಲ್ದಾರೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಹಂಝ,ಗಸ್ತು ಅರಣ್ಯ ಪಾಲಕರಾದ ಆರ್.ಎಸ್. ವೆಂಕಟೇಶ, ಜಗದೀಶ, ಸಂಪತ್ ಕುಮಾರ್ ಹಾಗೂ ಸಿಬ್ಬಂದಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ದೊರೆತ ಗುಪ್ತ ಮಾಹಿತಿ ಮತ್ತು ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.