ಹೊಸದಿಗಂತ ವರದಿ, ದಾವಣಗೆರೆ:
ಬ್ಯಾಂಕ್ ಎಟಿಎಂ ಯಂತ್ರದಿಂದ ಹಣ ದೋಚಲು ಯತ್ನಿಸಿದ ಕಳ್ಳರು, ಪೆಟ್ರೋಲ್ ಸುರಿದಿದ್ದರಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಪರಾರಿಯಾದ ಘಟನೆ ಜಿಲ್ಲೆಯ ಜಗಳೂರು ತಾಲ್ಲೂಕು ಬಿಳಿಚೋಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಭರಮಸಾಗರದ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ರಾತ್ರಿ ಹಣ ಕಳ್ಳತನಕ್ಕೆ ಯತ್ನಿಸಿದ ದುಷ್ಕರ್ಮಿಗಳು ಯಂತ್ರವನ್ನು ಕಬ್ಬಿಣ ರಾಡ್ ನಿಂದ ಒಡೆಯಲು ಸಾಧ್ಯವಾಗದಿದ್ದಾಗ ಪೆಟ್ರೋಲ್ ಸುರಿದಿದ್ದಾರೆ. ಇದರಿಂದಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಹೀಗಾಗಿ ಬೆಚ್ಚಿಬಿದ್ದ ಕಳ್ಳರು ಸ್ಥಳದಿಂದ ಓಡಿ ಹೋಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬೆಂಕಿ ನಂದಿಸಿದ್ದು, ಶ್ವಾನ ದಳ, ಬೆರಳಚ್ಚು ತಜ್ಞರು ಪರಿಶೀಲಿಸಿದ್ದಾರೆ. ಬಿಳಿಚೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.