ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಚಾರಣೆಗೆಂದು ಕರೆದಿದ್ದ ಎಎಸ್ಐ ಮೇಲೆ ನಡುರಸ್ತೆಯಲ್ಲಿ ಹಲ್ಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ನಾಗಮಂಗಲ ಗ್ರಾಮಾಂತರದಲ್ಲಿ ಎಎಸ್ ಐ ರಾಜು ಮೇಲೆ ಮಜ್ಜನಕೊಪ್ಪಲು ಪೂಜಾರಿ ಕೃಷ್ಣ ಹಲ್ಲೆಗೆ ಯತ್ನಿಸಿದ್ದಾರೆ.
ಆರೋಪಿ ಕೃಷ್ಣ ವಿರುದ್ಧ ಆತನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಣಕ್ಕಾಗಿ ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಎಎಸ್ಐ ರಾಜು ದೂರಿನ ನಂತರ ಪೊಲೀಸ್ ಠಾಣೆಗೆ ಕೃಷ್ಣನನ್ನು ಕರೆತರಲು ಹೋಗಿದ್ದರು. ನಾಗಮಂಗಲ ನ್ಯಾಯಾಲಯದ ಬಳಿ ನಿಂತಿದ್ದ ಕೃಷ್ಣನನ್ನು ಎಎಸ್ ಐ ರಾಜು ಕರೆದಿದ್ದರು.
ಠಾಣೆಗೆ ಬರಲು ಒಪ್ಪದಿದ್ದಾಗ ಕೃಷ್ಣನ ಕಾಲರ್ ಹಿಡಿದು ಬಲವಂತವಾಗಿ ಆಟೋಗೆ ಹತ್ತಿಸಲು ಎಎಸ್ಐ ಯತ್ನಿಸಿದ್ದಾರೆ. ಆ ಕ್ಷಣದಲ್ಲಿ ಕೃಷ್ಣ ಎಎಸ್ಐ ರಾಜುವನ್ನು ತಳ್ಳಿದ್ದಾನೆ. ತಳ್ಳಿದಾಗ ರಾಜು ಕೆಳಗೆ ಬೀಳುತ್ತಾರೆ. ಬಳಿಕ ಕೃಷ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸ್ಥಳೀಯರು ಇಡೀ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ.