ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆಗಿರುವ ಶಾಸಕ ಬಸವರಾಜ ರಾಯರೆಡ್ಡಿ ಅವರ ಧಾರವಾಡದ ಫಾರ್ಮ್ಹೌಸ್ನಲ್ಲಿ ದರೋಡೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಆ.13 ರಂದು ಸುಮಾರು 8-10 ಜನರ ಗುಂಪು ಫಾರ್ಮ್ಹೌಸ್ಗೆ ನುಗ್ಗಿದೆ. ಫಾರ್ಮ್ಹೌಸ್ನಲ್ಲಿ ಮಲಗಿದ್ದ ಕಣ್ಣಪ್ಪ ಜಡ್ಲಿ, ಹನುಮಂತ ಧನದಾವರ್, ಅಶೋಕ ಪೋತಲಿ, ಲಕ್ಷ್ಮಣ ಚಂದರಗಿ ಎಂಬುವವರನ್ನ ಎಬ್ಬಿಸಿದ ದರೋಡೆಕೋರರು ಅವರಿಗೆ ಚಾಕು ತೋರಿಸಿ ಹೆದರಿಸಿದ್ದಲ್ಲದೇ ಅವರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಬಾಯಿಗೆ ಗಮ್ ಟೇಪ್ ಸುತ್ತಿ ಅವರ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನ ದರೋಡೆ ಮಾಡಿದ್ದಾರೆ.
ಅದೇ ದಿನ ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ಗುಂಜನ್ ಆರ್ಯ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ದರೋಡೆಕೋರರ ಬಂಧನಕ್ಕೆ ಒಟ್ಟು 8 ತಂಡಗಳನ್ನು ರಚಿಸಿದ್ದರು. ಕೊನೆಗೆ 15 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಅವರೇ ದರೋಡೆ ಮಾಡಿದ್ದು ಎಂದು ತಿಳಿದುಬಂದಿದೆ.