July 1, 2026
Wednesday, July 1, 2026
spot_img

ಆಷಾಢ ಮಾಸದಲ್ಲಿ ಚಾಮುಂಡಿತಾಯಿ ದರುಶನಕ್ಕೆ ಹೋಗುವವರ ಗಮನಕ್ಕೆ: ಬೆಟ್ಟದ ಮೇಲೆ ಪಾರ್ಕಿಂಗ್‌ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೈಸೂರಿನ ಪ್ರಸಿದ್ಧ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಈ ವೇಳೆ ಪಾರ್ಕಿಂಗ್‌ ಸಮಸ್ಯೆ, ವಿಐಪಿ ದರುಶನದಿಂದ ರಶ್‌ ಇನ್ನಿತರ ಸಮಸ್ಯೆಗಳು ಬಾಧಿಸುತ್ತವೆ. ಈ ಹಿನ್ನೆಲೆಯಲ್ಲಿ ಶುಕ್ತವಾರ, ಶನಿವಾರ ಹಾಗೂ ಭಾನುವಾರ ಯಾವುದೇ ಪರ್ಸನಲ್‌ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಎಂಟ್ರಿ ಇಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಈ ವರ್ಷ ಜುಲೈ 17 ರಿಂದ ಆಗಸ್ಟ್ 7 ರ ಅವಧಿಯಲ್ಲಿ ವಿಶೇಷ ಪೂಜಾ ದಿನಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಪ್ರಾಧಿಕಾರವು ಸಭೆ ನಡೆಸಿ ಸಿದ್ಧತೆಗಳನ್ನು ಅಂತಿಮಗೊಳಿಸಿದೆ. ಇಂದು ಚಾಮುಂಡಿ ಬೆಟ್ಟಕ್ಕೆ ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿದ್ದು, ಆಷಾಢ ವಿಶೇಷ ಪೂಜೆಗಳ ಹಿನ್ನೆಲೆ ವ್ಯವಸ್ಥೆಯನ್ನು ಗಮನಿಸಿದ್ದಾರೆ.

ಕಳೆದ ಬಾರಿ ವಿಐಪಿಗಳ ಆಗಮನದಿಂದ ಸಾಮಾನ್ಯ ಮತ್ತು 300 ರೂಪಾಯಿ ಟಿಕೆಟ್ ಪಡೆದ ಭಕ್ತರಿಗೆ ತೊಂದರೆಯಾಗಿತ್ತು ಎಂಬ ದೂರಿನ ಮೇರೆಗೆ ಈ ಬಾರಿ ಸಮರ್ಪಕ ನಿರ್ವಹಣೆಗೆ ಒತ್ತು ನೀಡಲಾಗಿದೆ. ಮುಖ್ಯವಾಗಿ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಬೆಟ್ಟದ ಮೇಲಕ್ಕೆ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿದರು.

ಭಕ್ತರು ಖಾಸಗಿ ವಾಹನಗಳನ್ನು ಲಲಿತ ಮಹಲ್ ಬಳಿ ನಿಲ್ಲಿಸಬೇಕು. ಅಲ್ಲಿಂದ ಚಾಮುಂಡಿಬೆಟ್ಟಕ್ಕೆ ತೆರಳಲು ಕೆಎಸ್ಆರ್ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು. ಇದರಿಂದ ಸಾಮಾನ್ಯ ಭಕ್ತರು ಅನಗತ್ಯವಾಗಿ ಹೆಚ್ಚು ಸಮಯ ಕಾಯುವುದನ್ನು ತಪ್ಪಿಸಿ, ಸುಗಮವಾಗಿ ದೇವಿಯ ದರ್ಶನ ಪಡೆಯಲು ಸಾಧ್ಯವಾಗುತ್ತದೆ ಎಂದು ಯತೀಂದ್ರ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !