ಹೊಸದಿಗಂತ ವರದಿ ವಿಜಯಪುರ:
ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಅವಹೇಳನ ಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ, ಶಾಸಕನ ಹತ್ಯೆಗೆ ಸಂಚು ನಡೆದಿದೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಅನ್ಯಕೋಮಿನ ಯುವಕ ಮಾತನಾಡಿದ ಆಡಿಯೋ ಜಿಲ್ಲೆಯಲ್ಲಿ ವೈರಲ್ ಆಗಿರುವುದು ಆತಂಕ ಮೂಡಿಸಿದೆ.
ಕಳೆದ ಏ.7 ರಂದು ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್ ಭಾಷಣ ಮಾಡುವ ವೇಳೆ, ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ, ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಒಟ್ಟಾಗಿ ಎಂದು ಕರೆ ನೀಡಿರುವ ಮುಸ್ಲಿಂ ಯುವಕನ ಸ್ಫೋಟಕ ಆಡಿಯೋ ವೈರಲ್ ಆಗಿದೆ.
ಭಾಷಣದಲ್ಲಿ ಏನಿದೆ?
ಆಡಿಯೋ ಸಂಭಾಷಣೆಯಲ್ಲಿ ಗೆಳೆಯರೇ.. ನಮಸ್ಕಾರ ಎಲ್ಲ ಸಹೋದರ, ಸಹೋದರಿಯರಿಗೆ ನಮಸ್ಕಾರ. ವಿಜಯಪುರದಲ್ಲಿಂದ ದೊಡ್ಡ ಮೀಟಿಂಗ್ ಕರೆಯಲಾಗಿತ್ತು. ನಗರದ ಆಲಂಗೀರ್ ಹಾಲ್ನಲ್ಲಿ ಎಂಎಂಸಿ ಮೀಟಿಂಗ್ನಲ್ಲಿ ವಿಜಯಪುರದ ಎಲ್ಲ ದಿಗ್ಗಜ ಸದಸ್ಯರು, ಉಲ್ಮಾಗಳು ಅಲ್ಲಿ ಇದ್ದರು. ಅಲ್ಲಿ ಏ.15 ರಂದು ವಿಜಯಪುರ ಬಂದ್ ಮಾಡಲು ನಿರ್ಧಾರ ಆಗಿದೆ. ಇನ್ನು ಯತ್ನಾಳ್ಗೆ ಅದು ಫೈನಲ್ ದಿನ. ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಯತ್ನಾಳ್. ಇದನ್ನ ವಿರೋಧಿಸಿ 1 ಲಕ್ಷ ಜನರು ರ್ಯಾಲಿಯಲ್ಲಿ ಸೇರುತ್ತಿದ್ದಾರೆ. ಈ ಬಾರಿ ಎಲ್ಲರು ನಿರ್ಧರಿಸಿದ್ದಾರೆ ಅವನದ್ದು ಕೊನೆಯ ದಿನ ಅಂತಾ. ಅವನು ಅರೆಸ್ಟ್ ಆಗಬೇಕು, ರ್ಯಾಲಿ ಅವನ ಮನೆಗೆ ತೆರಳಬೇಕು, ರ್ಯಾಲಿ ಅಲ್ಲಿಂದ ಅವನ ಮನೆಗೆ ನೇರವಾಗಿ ಹೋಗುತ್ತೆ. ಆದ್ದರಿಂದ ಎಲ್ಲ ಸಹೋದರ, ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಏ.15 ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಸೇರಬೇಕು, ನಿಮ್ಮ ಅಕ್ಕ- ಪಕ್ಕದ ಊರುಗಳಲ್ಲಿರುವ ಎಲ್ಲ ಸ್ನೇಹಿತರು, ಅಣ್ಣ-ತಮ್ಮಂದಿರಿಗೆ ವಿಷಯ ಹೇಳಿ. ಈ ಬಾರಿ ಅವನದ್ದು ಫೈನಲ್ ದಿನ ಇದೆ. ಇಲ್ಲಿವರೆಗೂ ಅವನ ವಿರುದ್ಧ ದೂರು ಕೊಡುತ್ತಿದ್ದೆವು. ಆದರೆ ಏನಾಗುತ್ತಿತ್ತು ಅವನು ಬೇಲ್ ಮೇಲೆ ಹೊರಗಡೆ ಬರ್ತಾ ಇದ್ದ. ಈ ಬಾರಿ ಆ ರೀತಿ ಆಗಲ್ಲ. ಈ ಬಾರಿ ಅವನು ಅರೆಸ್ಟ್ ಆಗಬೇಕು, ಇಲ್ಲ ಅವನ ರುಂಡ ದೇಹದಿಂದ ಇಬ್ಭಾಗ ಆಗಬೇಕು. ಮುಸ್ಲಿಂ ಸದಸ್ಯರು ಎಲ್ಲರೂ ಸಿದ್ಧರಾಗಿ ಕುಳಿತಿದ್ದಾರೆ. ಏ.15 ರಂದು ಯಾವುದೇ ಕೆಲಸ ಇದ್ದರೂ ರಜೆ ಮಾಡಿ, ಅಂಬೇಡ್ಕರ್ ವೃತ್ತದಲ್ಲಿ ಸೇರಬೇಕು ಎನ್ನುವ ಈ ರೀತಿಯ ಹೇಳಿಕೆ ಆಡಿಯೋದಲ್ಲಿ ವೈರಲ್ ಆಗಿದ್ದು, ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.