ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಯೋಧ್ಯೆ ಭವ್ಯ ರಾಮ ಮಂದಿರ ಪ್ರಾಣಪ್ರತಿಷ್ಠೆ ನೆರೆವೇರಿಸಿದ ಪ್ರಧಾನ ಅರ್ಚಕ ಲಕ್ಷ್ಮಿಕಾಂತ್ ದೀಕ್ಷಿತ್ ನಿಧನರಾಗಿದ್ದಾರೆ. 86 ವರ್ಷದ ಲಕ್ಷ್ಮಿಕಾಂತ್ ದೀಕ್ಷಿತ್ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲಿದ್ದರು. ಇಂದು ಬೆಳಗ್ಗೆ ಲಕ್ಷ್ಮಿಕಾಂತ್ ದೀಕ್ಷಿತ್ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮಣಿಕಾಂತ್ ಘಾಟ್ನಲ್ಲಿ ಸಕಲ ಗೌರವಗಳೊಂದಿಗೆ ಲಕ್ಷ್ಮಿಕಾಂತ್ ದೀಕ್ಷಿತ್ ಅಂತ್ಯಕ್ರಿಯೆ ನಡೆಯಲಿದೆ.
ಜನವರಿ 22ರಂದು ರಾಮ ಮಂದಿರ ಪ್ರಾಣಪ್ರತಿಷ್ಠೆ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅಮೃತ ಹಸ್ತದ ಮೂಲಕದ ಬಾಲ ರಾಮ ಪ್ರಾಣಪ್ರತಿಷ್ಠೆ ನಡೆದಿತ್ತು. ಈ ಪ್ರಾಣಪ್ರತಿಷ್ಠೆಯಲ್ಲಿ ಪ್ರಧಾನ ಅರ್ಚಕರಾಗಿ ಲಕ್ಷ್ಮಿಕಾಂತ್ ದೀಕ್ಷಿತ್ ಕಾರ್ಯನಿರ್ವಹಿಸಿದ್ದರು.
ಮೂಲತಃ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯವರಾಗಿರುವ ಲಕ್ಷ್ಮಿಕಾಂತ್ ದೀಕ್ಷಿತ್ ವಾರಣಸಿಯಲ್ಲಿ ನೆಲೆಸಿದ್ದಾರೆ. ಲಕ್ಷ್ಮಿಕಾಂತ್ ಪೋಷಕರು ಸೇರಿದಂತೆ ಕೆಲ ತಲೆಮಾರು ವಾರಣಾಸಿಯಲ್ಲಿ ನೆಲೆಗೊಂಡಿದೆ. ಲಕ್ಷ್ಮಿಕಾಂತ್ ದೀಕ್ಷಿತ್ ನಿಧನಕ್ಕೆ ಪ್ರಧಾನಿ ಮೋದಿ , ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಬೇಸರ ಹಾಗೂ ನಿರಾಶಾದಾಯಕ ಸುದ್ದಿ ಕೇಳಿ ನೋವಾಗಿದೆ. ಸಂಗ್ವೇದ ವಿದ್ಯಾಲಯದ ಋಗ್ವೇದ ಪಂಡಿತರು, ಅರ್ಚಕರಾಗಿರುವ ಲಕ್ಷ್ಮಿಕಾಂತ್ ದೀಕ್ಷಿತ್ ನಿಧನ ಸುದ್ದಿಯಿಂದ ನೋವಾಗಿದೆ. ದೀಕ್ಷಿತ್ ಜಿ ಕಾಶಿಯ ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಾಶಿ ವಿಶ್ವನಾಥನ ಧಾಮ ಹಾಗೂ ಆಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಾಗೂ ಪ್ರಾಣಪ್ರತಿಷ್ಠೆ ವೇಳೆ ದೀಕ್ಷಿತ್ ಜಿ ಮಾರ್ಗದರ್ಶನವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಲಕ್ಷ್ಮಿಕಾಂತ್ ದೀಕ್ಷಿತ್ ನಿಧನ ಈ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕಾಶಿ ಧಾಮದ ಪಂಡಿತರು, ಆಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರಾಗಿರುವ ಅಚಾರ್ಯ ಲಕ್ಷ್ಮಿಕಾಂತ್ ದೀಕ್ಷಿತ್ ನಿಧನ ಆಧ್ಯಾತ್ಮಿಕ ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಸಂಸ್ಕೃತ ಭಾಷೆ ಹಾಗೂ ಭಾರತೀಯ ಸಂಸ್ಕೃತಿ ಅಧ್ಯಯನ, ಯುವ ಸಮೂಹಕ್ಕೆ ಈ ಪರಂಪರೆ, ಸಂಸ್ಕೃತಿಯನ್ನು ತಲುಪಿಸುವ ಕಾರ್ಯ ಮಾಡಿದ ಆಚಾರ್ಯರು ಯಾವತ್ತಿಗೂ ನೆನಪಿನಲ್ಲಿರುತ್ತಾರೆ. ಭಗವಾನ್ ಶ್ರೀರಾಮ ಅವರ ಆತ್ಮಕ್ಕೆ ಶಾಂತಿ ಸಿಗಲು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.