ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಪ್ರಸಿದ್ಧ ಚಾರಣ ತಾಣ ಕುಮಾರಪರ್ವತ ಚಾರಣಕ್ಕೆ ಫೆ.1ರಿಂದ ನಿರ್ಬಂಧ ವಿಧಿಸಲಾಗಿದೆ.
ಪ್ರಸ್ತುತ ಜಿಲ್ಲೆಯಾದ್ಯಂತ ಬಿರು ಬಿಸಿಲು ಮತ್ತು ಪರ್ವತದಲ್ಲಿ ನೀರಿನ ಸಮಸ್ಯೆ ಎದುರಾಗುವ ಕಾರಣ ಚಾರಣಿಗರ ಹಿತದೃಷ್ಠಿಯಿಂದ ಫೆ.1ರಿಂದ ಅಕ್ಟೋಬರ್ ತಿಂಗಳ ತನಕ ಅಥವಾ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ಕುಮಾರಪರ್ವತ ಚಾರಣದ ಅವಧಿ ಮುಗಿದಿದೆ. ಅಲ್ಲದೆ ಕುಮಾರಪರ್ವತದಲ್ಲಿ ಹುಲ್ಲುಗಾವಲು ಸಂಪೂರ್ಣ ಒಣಗಿದೆ. ಮುಂದೆ ಬಿಸಿಲಿನ ಬೇಗೆಗೆ ಬೆಂಕಿಗೆ ತುತ್ತಾಗದಂತೆ ಮುಂಜಾಗ್ರತಾ ಕ್ರಮ ಜರುಗಿಸುವ ಅವಶ್ಯಕತೆ ಇದೆ.
ಇದೀಗ ಅಧಿಕ ಸಂಖ್ಯೆಯಲ್ಲಿ ಕುಮಾರಪರ್ವತಕ್ಕೆ ಬರುವ ಚಾರಣಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಅವರಿಗೆ ಬೇಕಾದ ನೀರಿನ ವ್ಯವಸ್ಥೆ ಸಂಪೂರ್ಣ ಬತ್ತಿ ಹೋಗಿದೆ. ಬೇಸಿಗೆಯ ಕಾರಣದಿಂದಾಗಿ ನೀರಿನ ಮೂಲಗಳು ಬತ್ತಿ ಹೋಗಿದೆ. ಕಲ್ಲು ಮಂಟಪದಲ್ಲಿನ ನೀರಿನ ಝರಿ, ಶೇಷಪರ್ವತದ ನಂತರ ಇರುವ ನೀರಿನ ಸೆಲೆ ಬತ್ತಿದ್ದು ಚಾರಣಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣ ಬಂದಾಗಿರುತ್ತದೆ.
ಚಾರಣಿಗರಿಗೆ ಬೇಕಾದ ನೀರಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ನಿರ್ಬಂಧ ವಿಧಿಸಲಾಗಿದೆ. ಚಾರಣಿಗರು ತಂಗುವ ಗಿರಿಗದ್ದೆಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಒದಗಿಸಲು ತೊಂದರೆಯಾಗಿದೆ. ಆದುದರಿಂದ ಫೆ.1ರಿಂದ ಅಕ್ಟೋಬರ್ ತನಕ ಹಾಗೂ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣಕ್ಕೆ ಚಾರಣಿಗರಿಗೆ ನಿರ್ಬಂಧ ವಿದಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.