ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆದಿಪುರುಷ್ ಸಿನಿಮಾದ ಸಂಕಷ್ಟಗಳು ಅಂತ್ಯವಾಗುತ್ತಲೇ ಇಲ್ಲ, ಬದಲಿಗೆ ದಿನಕ್ಕೊಂದು ಹೊಸ ಸಂಕಷ್ಟಗಳು ಪೋಣಿಸಿಕೊಳ್ಳುತ್ತಲೇ ಸಾಗುತ್ತಿವೆ. ಶ್ರೀರಾಮ, ರಾವಣ ಇನ್ನಿತರೆ ಪಾತ್ರಗಳ ವಸ್ತ್ರ ವಿನ್ಯಾಸ, ಪಾತ್ರಗಳ ಮೂಲ ವ್ಯಕ್ತಿತ್ವವನ್ನು ತಿರುಚಿರುವ ರೀತಿಯ ಬಗ್ಗೆ ಆಕ್ಷೇಪಿಸಿದ್ದಾರೆ. ಹಿಂದೂ ಸೇನಾ ಸಂಘಟನೆಯು ದೆಹಲಿ ಹೈಕೋರ್ಟ್ಗೆ ಆದಿಪುರುಷ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಈ ಸಿನಿಮಾವು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದಿದೆ. ಇದರ ಬೆನ್ನಲ್ಲೆ ಇದೀಗ ಚತ್ತೀಸ್ಘಡ ಸಿಎಂ ಸಹ ಸಿನಿಮಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ರಾಜ್ಯದಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲು ಸಿದ್ಧ ಎಂದಿದ್ದಾರೆ.
ಆದಿಪುರುಷ್ ಸಿನಿಮಾ ಬಗ್ಗೆ ಮಾತನಾಡಿದ ಚತ್ತೀಸ್ಘಡ ಸಿಎಂ ಭೂಪೇಶ್ ಭಗೇಲ, ನಮ್ಮ ಆರಾಧ್ಯ ದೈವಗಳ ಚಿತ್ರಣವನ್ನೇ ಬದಲು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಶ್ರೀರಾಮ ಹಾಗೂ ಹನುಮಂತ ಅವರ ಮೂಲ ಭಾವ ಭಕ್ತಿ, ಸೌಮ್ಯತೆ ಆದರೆ ಶ್ರೀರಾಮರನ್ನು ಯೋಧನನ್ನಾಗಿ, ಹನುಮಂತನನ್ನು ಆಂಗ್ರಿ ಬರ್ಡ್ ರೀತಿಯಲ್ಲಿ ಆದಿಪುರುಷ್ ಸಿನಿಮಾದಲ್ಲಿ ತೋರಿಸಲಾಗಿದೆ, ಅಲ್ಲದೆ ಸಿನಿಮಾದಲ್ಲಿ ಬಳಸಲಾಗಿರುವ ಭಾಷೆಯು ಸರಿಯಿಲ್ಲ ಎಂದು ಆಕ್ಷೇಪಣೆ ಎತ್ತಿದ್ದಾರೆ.
”ಹನುಮಂತನ ಪಾತ್ರದ ಮೂಲಕ ಹೇಳಿಸಿರುವ ಸಂಭಾಷಣೆಗಳು ಗೌರವಪೂರ್ವಕವಾಗಿಲ್ಲ. ಅಲ್ಲದೆ ಅರಬಿ, ಪಾರ್ಸಿ ಶಬ್ದಗಳ ಬಳಕೆಯನ್ನೂ ಸಹ ಕೆಲವು ಸಂಭಾಷಣೆಗಳಲ್ಲಿ ಮಾಡಲಾಗಿದೆ. ಈಗಿನ ಕಾಲದ ಮಕ್ಕಳು ಈ ಸಿನಿಮಾ ನೋಡಿದರೆ ರಾಮಾಯಣದ ಕುರಿತಂತೆ ಅವರಿಗೆ ಯಾವ ರೀತಿಯ ಅಭಿಪ್ರಾಯ ಮೂಡಬಹುದು” ಎಂದು ಚತ್ತೀಸ್ಘಡ ಸಿಎಂ ಭೂಪೇಶ್ ಭಗೇಲ ಆತಂಕ ವ್ಯಕ್ತಪಡಿಸಿದ್ದಾರೆ.
ಚತ್ತೀಸ್ಘಡದಲ್ಲಿ ಆದಿಪುರುಷ್ ಸಿನಿಮಾ ಬ್ಯಾನ್ ಆಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಭೂಪೇಶ್ ಭಗೇಲ, ಜನ ಈಗ ಸಿನಿಮಾ ನೋಡುತ್ತಿದ್ದಾರೆ. ಒಂದೊಮ್ಮೆ ಜನರಿಂದ ಬೇಡಿಕೆ ಬಂದರೆ ಖಂಡಿತ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.