ಹೊಸದಿಗಂತ ವರದಿ ಯಲ್ಲಾಪುರ:
ತಾಲೂಕಿನ ಚಂದ್ಗುಳಿ ವ್ಯಾಪ್ತಿಯ ಉಪಳೇಶ್ವರ ಹುತ್ಕಂಡ ಭಾಗದಲ್ಲಿ ಎರಡು ಕರಡಿ ಮತ್ತು ಒಂದು ಮರಿ ಸಂಚರಿಸುತ್ತಿದ್ದು ಶನಿವಾರ ಬೆಳ್ಳಂಬೆಳಿಗ್ಗೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.
ಶನಿವಾರ ಬೆಳಿಗ್ಗೆ ಏಳು ಗಂಟೆ ಹೊತ್ತಿಗೆ ಕಾರ್ಯನಿರ್ಮಿತ್ತ ದ್ವಿಚಕ್ರವಾಹನದಲ್ಲಿ ಚಂದ್ಗುಳಿ ಪಂಚಾಯತದ ಸದಸ್ಯ ಆರ್.ಎಸ್.ಭಟ್ಟ ಕಸವಿಲೇವಾರಿ ಘಟಕದ ಬಳಿ ಮಾಯನಜಡ್ಡಿ ಮಾರ್ಗದಲ್ಲಿ ಸಾಗುತ್ತಿರುವಾಗ ಎರಡು ಕರಡಿಗಳು ಧಾಳಿ ನಡೆಸಿದವು. ಮೊದಲು ಅವರ ಕಾಲನ್ನು ಘಾಸಿಗೊಳಿಸಿತು.ನಂತರ ಇವರು ಕೂಗಾಡುತ್ತ ಬೈಕ್ ನಲ್ಲಿ ತಪ್ಪಿಸಿಕೊಂಡು ಹೋದಾಗಲೂ ಬೆಂಬತ್ತಿದ ಕರಡಿಗಳು ಮುಂದೆ ಹೋಗಿ ಅಡ್ಡಗಟ್ಟಿ ಮುಖದ ಎರಡು ಭಾಗದ ಕೆನ್ನೆಗಳಿಗೆ ಭುಜಕ್ಕೆ ತೊಡೆಯ ಭಾಗದಲ್ಲಿ ಗಂಭೀರವಾಗಿ ಘಾಸಿಗೊಳಿಸಿದೆ. ಎರಡು ಕರಡಿಗಳ ಜೊತೆ ಒಂದು ಮರಿಯೂ ಇದೆ. ನಿರ್ಜನ ಪ್ರದೇಶವಾದ ಕಾರಣ ಹೇಗೋ ಮುಂದುವರೆದು ತಕ್ಷಣದಲ್ಲಿ ಸರಕಾರಿ ಆಸ್ಪತ್ರೆಗೆ ಸೇರಿದರು.ಹೆಚ್ವಿನ ಚಿಕಿತ್ಸೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಆರ್.ಎಸ್..ಭಟ್ಟ ರವರಿಗೆ ಕರಡಿ ಧಾಳಿ ನಡೆಸಿ ಘಾಸಿಗೊಳಿಸಿದ ಸಂಗತಿ ತಿಳಿದ ಶಾಸಕ ಶಿವರಾಮ ಹೆಬ್ಬಾರ್ ತಾಲೂಕಾಸ್ಪತ್ರೆಗೆ ತೆರಳಿ ಗಾಯಾಳುವಿನ ಸ್ಥಿತಿಯನ್ನು ವೀಕ್ಷಿಸಿದರು.
ಕ್ರಮಕ್ಕೆ ಆಗ್ರಹ
ಈ ಭಾಗದಲ್ಲಿ ಈ ತರಹ ಕರಡಿ,ಚಿರತೆಗಳ ಉಪಟಳ ಇತ್ತೀಚಿನ ದಿನದಲ್ಲಿ ವ್ಯಾಪಕವಾಗಿದ್ದು ರಾತ್ರಿಯಲ್ಲದೇ ಹಗಲಿನಲ್ಲಿನಲ್ಲಿಯೂ ನಿರ್ಜನ ಒಳ ರಸ್ತೆಗಳಲ್ಲಿ ಸಂಚರಿಸುವದು ಭಯಭೀತಿಯನ್ನು ಸೃಷ್ಟಿಸಿದೆ.ಶಾಲಾ ಮಕ್ಕಳು ಬೆಳಗಿನ ಜಾವ ಸಂಜೆ ಹೊತ್ತಿನಲ್ಲಿ ದೂರದ ಹಳ್ಳಿಗಳಿಗೆ ಸಾಗಬೇಕಿದೆ.ಇಂದಿನ ಈ ಘಟನೆ ಈ ಭಾಗದ ಜನರಲ್ಲಿ ಆತಂಕವನ್ನು ಸೃಷ್ಠಿಸಿದೆ.ಅರಣ್ಯ ಇಲಾಖೆ ಜನರೊಡಗೂಡಿ ಕೂಡಲೇ ಕ್ರಮವಹಿಸುವಂತೆ ಉತ್ತರ ಕನ್ನಡ ಭಾರತೀಯ ಕಿಸಾನ್ ಸಂಘದ ಪ್ರಮುಖ ಗೋಪಾಲಕೃಷ್ಣ ರಾ ಬಾಳೆಗದ್ದೆ ಹಾಗೂ ಗ್ರಾಮ ಸಮಿತಿಗಳು ಆಗ್ರಹಿಸಿವೆ.