February 9, 2026
Monday, February 9, 2026
spot_img

ದೇಶದ ಅಭಿವೃದ್ಧಿಯ ಹಿಂದೆ ಸಂಘದ ಶ್ರಮವಿದೆ : ವಿಶ್ವ ಹಿಂದೂ ಪರಿಷತ್ ಪ್ರಾಂತ ಗೋರಕ್ಷಕ ಪ್ರಮುಖ್ ಕೆ.ಆರ್.ಸುನಿಲ್

ಹೊಸದಿಗಂತ ವರದಿ ಚಿತ್ರದುರ್ಗ:

ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಭಾರತ ಬಡ, ದಡ್ಡ ರಾಷ್ಟ್ರವಾಗಿತ್ತು. ಈಗ ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿದ್ದು, ಇದರ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶ್ರಮವಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಗೋರಕ್ಷಕ ಪ್ರಮುಖ್ ಕೆ.ಆರ್. ಸುನಿಲ್ ಹೇಳಿದರು.

ನಗರದ ರೈಲು ನಿಲ್ದಾಣ ಪ್ರದೇಶದ ತ್ರಿಶೂಲ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಇಡೀ ಜಗತ್ತಿಗೆ ವಿಜ್ಞಾನ ನೀಡಿದ್ದು ನಮ್ಮ ಹೆಮ್ಮೆಯ ಭಾರತ ದೇಶ. ಯೂರೋಫ್‌ನ ಸ್ಪೆಲ್ಲಿಂಗ್ ಪರೀಕ್ಷೆಯಲ್ಲಿ ಭಾರತೀಯರು ಪ್ರಥಮ ಸ್ಥಣ ಗಳಿಸಿದ್ದಾರೆ. ಆಪರೇಷನ್ ಸಿಂಧೂರ ಮೂಲಕ ಉಗ್ರರ ಹುಟ್ಟಡಗಿಸಿದೆವು. ಈ ಎಲ್ಲಾ ಬದಾಲಾವಣೆ ಹಿಂದೆ ಸಂಘದ ಶಕ್ತಿ ಇದೆ. ಯುಗ ಪರಿವರ್ತನೆ ಕಾಲ ಸನ್ನಿಹಿತವಾಗಿದೆ. ಜನರ ಮಾನಸಿಕತೆ ಬದಲಾವಣೆ ಜೊತೆ ಜೊತೆಗೆ ದೇಶದ ಅಭಿವೃದ್ದಿ ಸಾಧಿಸಬೇಕಿದೆ ಎಂದರು.
ಜಿಮ್ ಜಿಹಾದ್ ಹೆಸರಿನಲ್ಲಿ ನಮ್ಮ ಅಕ್ಕತಂಗಿಯರನ್ನು ಬಳಸಿಕೊಂಡು ಮತಾಂತರ ಮಾಡುತ್ತಾರೆ. ಇಂತಹ ಹತ್ತು ಹಲವು ಸವಾಲುಗಳನ್ನು ಎದುರಿಸಬೇಕಿದೆ. ಹಿಂದೂ ಸಮಾಜವನ್ನು ಸ್ವಾಭಿಮಾನಿ ಸಮಾಜವನ್ನಾಗಿ ನಿರ್ಮಾಣ ಮಾಡಬೇಕು. ನಮ್ಮ ದೇಶದಲ್ಲಿ ಎಲ್ಲಿ ಬೇಕಾದರೂ ಮಸೀದಿ ಕಟ್ಟಬಹುದು. ಆದರೆ ಬೇರೆ ದೇಶಗಳಲ್ಲಿ ನಮ್ಮ ಆಚರಣೆಗಳಿಗೆ ಅವಕಾಶವಿಲ್ಲ. ಹಾಗಾಗಿ ಹಿಂದೂ ಸಮಾಜಕ್ಕೆ ಧರ್ಮಕ್ಕೆ ಅಪಮಾನವಾದಾಗ ಪ್ರತಿಯೊಬ್ಬ ಹಿಂದೂ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಚಿಕ್ಕಪುಟ್ಟವಿಚಾರಕ್ಕೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ. ಆದರೆ ಬಾಂಗ್ಲಾ, ಬಂಗಾಳದಲ್ಲಿ ಹಿಂದೂಗಳ ಹತ್ಯೆಯಾದರೂ ನಮ್ಮವರು ವಿರೋಧಿಸುತ್ತಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಕೇವಲ ಹೋರಾಟ ಮಾಡುವುದಲ್ಲ. ಪರಿವರ್ತನೆಗಳನ್ನು ಮಾಡಬೇಕು. ಮಕ್ಕಳಿಗೆ ಸಂಸ್ಕಾರ ನೀಡಬೇಕು. ಆ ಮೂಲಕ ನಮ್ಮಲ್ಲಿನ ಸಂಸ್ಕೃತಿ, ಪರಂಪರೆ ಮುಂದುವರಿಸಿಕೊಂಡು ಹೋಗಬೇಕು. ಸಮಾಜದಲ್ಲಿ ಜಾತಿ ಬೇಧ, ಮೇಲು ಕೀಳು ಭಾವನೆ ಬಿಡಬೇಕು. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಶ್ರೇಷ್ಠ ಭಾವನೆ ಬೆಳೆಸಿಕೊಳ್ಳಬೇಕಲು ಎಂದು ಸಲಹೆ ಮಾಡಿದರು.

ಕೊಟ್ಟೂರು ಕಟ್ಟೆಮನೆ ಹಿರೇಮಠ ಸಂಸ್ಥಾನದ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಚಿತ್ರದುರ್ಗ ಶ್ರೇಷ್ಟ ಭೂಮಿ ಐತಿಹಾಸಿಕ ಹಿನ್ನೆಲೆಯಲ್ಲಿ ಗುರುತಿಸಿಕೊಂಡಿದೆ. ಬ್ರಿಟೀಷರ ಆಳ್ವಿಕೆ ಆದರೂ ದುರ್ಗೆ ನಮಗೆ ಪ್ರೇರಣೆ. ದೇಶದ ಮಣ್ಣ್ಣಿಗೆ ಹೆಣ್ಣಿಗೆ ವಿಶೇಷ ಶಕ್ತಿ ಇದೆ. ತಾಯಿಯಿಂದ ಅನೇಕ ವೀರ ಪುರುಷರ ಕಥೆ ಕೇಳಿದ ಶಿವಾಜಿ ಮಹಾರಾಜ್ ಸ್ವರಾಜ್ಯ ನಿರ್ಮಾಣ ಮಾಡುವ ಪ್ರತಿಜ್ಞೆ ಮಾಡಿದರು. ಅದರಂತೆ ಅನೇಕ ವೀರ ಪುರುಷ ಮಹಿಳೆಯರನ್ನು ಕಳೆದುಕೊಂಡ ಭೂಮಿ ಭಾರತ. ನಮ್ಮ ಕೆಲವು ಹಿಂದೂ ಅರಸರು ಬ್ರಿಟೀಷರ ಜೊತೆ ಶಾಮೀಲಾದ ಪರಿಣಾಮ ಅನೇಕರು ಪ್ರಾಣ ಕಳೆದುಕೊಳ್ಳುವಂತಾಯಿತು ಎಂದರು.

ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ನವೀನ್ ಚಾಲುಕ್ಯ ಅಧ್ಯಕ್ಷತೆ ವಹಿಸಿದ್ದರು. ಅಹಲ್ಯಾ ವಿದ್ಯಾ ಮಂದಿರದ ಮುಖ್ಯಸ್ಥರಾದ ಸರಸ್ವತಿ ಉಪಸ್ಥಿತರಿದ್ದರು. ಜ್ಯೋತಿ ಬಸವರಾಜ್ ಹರ್ತಿ ಸ್ವಾಗತಿಸಿದರು. ಆಯುರ್ವೇದ ವೈದ್ಯೆ ಡಾ.ಅಶ್ವಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪತ್‌ಕುಮಾರ್ ವಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೃಹತ್ ಶೋಭಾಯಾತ್ರೆ ನಡೆಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !