ಹೊಸ ದಿಗಂತ ಡಿಜಿಟಲ್ ಡೆಸ್ಕ್:
6,975 ಕೋಟಿ ರೂ. ಮೌಲ್ಯದ 400 ಕಿ.ಮೀ. ರಸ್ತೆ ಕಾಮಗಾರಿ ಮತ್ತು ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಹಲವು ಯೋಜನೆಗಳಿಗೆ ಗುರುವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಬೆಳಗಾವಿ ಮುಂದಿನ ದಿನಗಳಲ್ಲಿ ಎಥೆನಾಲ್ ಉತ್ಪಾದನೆ ಅಷ್ಟೇ ಅಲ್ಲ, ವಿಮಾನಗಳ ಇಂಧನ ಉತ್ಪಾದನೆ ಮಾಡುವ ಕೇಂದ್ರವಾಗಲಿದೆ. ಲೋಕೋಪಯೋಗಿ ಸಚಿವರು ಕರ್ನಾಟಕದಲ್ಲಿ ಇಥೆನಾಯಿಲ್ ಬಳಕೆಗೆ ಪ್ರೋತ್ಸಾಹ ಕೊಡಿ. ಇದರಿಂದ ಪೆಟ್ರೋಲ್ ಗಿಂತಲೂ ಕಡಿಮೆ ದರದಲ್ಲಿ ಎಥೆನಾಲ್ ಲಭ್ಯವಾಗಲಿದೆ. ಪೆಟ್ರೋಲ್ನಲ್ಲಿ ಎಥೆನಾಲ್ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಥೆನಾಲ್ನ್ನು ಡೀಸೆಲ್ನಲ್ಲಿ ಉಪಯೋಗಿಸಲಾಗುವುದು ಎಂದರು.
ಬೆಳಗಾವಿ ಮೇಲ್ಸೇತುವೆ ಕಾಮಗಾರಿ ಆರಂಭಿಸುವುದಾಗಿ ಘೋಷಣೆ
ಬೆಳಗಾವಿ ಮೇಲ್ಸೇತುವೆ ಕಾಮಗಾರಿಯನ್ನೂ ಆರಂಭಿಸಲಾಗುವುದು. 6,900 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ಕೊಟ್ಟಿದ್ದೇವೆ. ಬೆಳಗಾವಿ-ಸಂಕೇಶ್ವರ ಮಧ್ಯೆ 6 ಲೈನ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಕರ್ನಾಟಕ-ಮಹಾರಾಷ್ಟ್ರ ನಡುವೆ ಉತ್ತಮ ಸಂಪರ್ಕ ಸಿಗಲಿದೆ ಎಂದು ಹೇಳಿದ್ದಾರೆ.
ಸುರೇಶ್ ಅಂಗಡಿ ಇದ್ದಾಗ ಬೆಳಗಾವಿಯಲ್ಲಿ ರಿಂಗ್ ರಸ್ತೆ ಕನಸು ಇತ್ತು. ಈಗ ಬೆಳಗಾವಿಯಲ್ಲಿ ರಿಂಗ್ ರಸ್ತೆ ಯೋಜನೆಗೆ ಚಾಲನೆ ಕೊಟ್ಟಿದ್ದೇವೆ. ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ಕಾಮಗಾರಿ ಮಾಡುವ ಯೋಜನೆ ಇತ್ತು. ನಾವು ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ಹೈವೇ ನಿರ್ಮಿಸುತ್ತಿದ್ದೇವೆ. ಮುಳ್ಳಯ್ಯನಗಿರಿ, ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ ಎಂದರು.
ಬೆಂಗಳೂರಿನ ಟ್ರಾಫಿಕ್ ನಿವಾರಿಸಲು ಬೆಂಗಳೂರು ರಿಂಗ್ ರೋಡ್ ಅನುಕೂಲ ಆಗಲಿದೆ. ಮೋನಾಲಿಯಲ್ಲಿ ಅಟಲ್ ಟನಲ್ ನಿರ್ಮಿಸಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಏಕ್ಸಪ್ರೆಸ್ ಹೈವೆ ಕನೆಕ್ಟ್ ಆಗಲಿದೆ. ಇದೇ ವರ್ಷಾಂತ್ಯದಲ್ಲಿ ಈ ಮಹತ್ವದ ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದರು.