ಪರಿಸರಸ್ನೇಹಿ ಇಂಧನ ವಲಯದಲ್ಲಿ ಭಾರತದೊಂದಿಗೆ ಬೆಲ್ಜಿಯಂ ಸಾಥ್: ಎಸ್.ಜೈಶಂಕರ್ ವಿಶ್ವಾಸ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದೊಂದಿಗೆ ವ್ಯಾಪಾರ, ರಾಜತಾಂತ್ರಿಕ ಸೇರಿದಂತೆ ಎಲ್ಲ ರೀತಿಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಯೂರೋಪ್ ಉತ್ಸುಕವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ.
ಬೆಲ್ಜಿಯಂನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಅವರು, ಯೂರೋಪ್ ನ ಹೆಬ್ಬಾಗಿಲು ಎನಿಸಿರುವ ಬೆಲ್ಜಿಯಂನೊಂದಿಗೆ ರಾಜಕೀಯ, ವ್ಯಾಪಾರ, ಸಹಕಾರ ಪಾಲುದಾರಿಕೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಬಲಗೊಳ್ಳಲಿದೆ ಎಂದರು. ಪ್ರಸ್ತುತ ಭಾರತ-ಬೆಲ್ಜಿಯಂ ನಡುವಿನ ವಾರ್ಷಿಕ ವ್ಯಾಪಾರ ಮೌಲ್ಯ ಸುಮಾರು 18 ಶತಕೋಟಿ ಡಾಲರ್ ನಷ್ಟಿದ್ದು, ಬಹುಹಿಂದಿನಿಂದಲೂ ಎರಡೂ ರಾಷ್ಟ್ರಗಳ ಬಾಂಧವ್ಯ ಉತ್ತಮವಾಗಿದೆ. ಹಸಿರು ಹೈಡ್ರೋಜನ್ ಇಂಧನದ ಜಾಗತಿಕ ಕೇಂದ್ರ ಎನಿಸಿರುವ ಬೆಲ್ಜಿಯಂ, ಪರಿಸರಸ್ನೇಹಿ ಇಂಧನ ವಲಯದಲ್ಲಿ ಭಾರತದೊಂದಿಗೆ ಸಹಕಾರ ಬಲಪಡಿಸಲಿದೆ ಎಂದು ತಿಳಿಸಿದರು. ಬಳಿಕ, ಬ್ರಸೆಲ್ಸ್ ನಲ್ಲಿ ಯೂರೋಪಿಯನ್ ಒಕ್ಕೂಟದ ವಿದೇಶ ವ್ಯವಹಾರಗಳ ಪ್ರತಿನಿಧಿ ಕಾಜಾ ಕಲ್ಲಾಸ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಸಚಿವ ಜೈಶಂಕರ್, ಭಾರತ ಮತ್ತು ಯೂರೋಪಿಯನ್ ಒಕ್ಕೂಟದ ನಡುವೆ ಸಾಮಾನ್ಯ ನೆಲೆಯಲ್ಲಿ ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ ಹಾಗೂ ವಿಶ್ವಾಸ ವೃದ್ಧಿ ಕುರಿತು ಫಲಪ್ರದ ಸಮಾಲೋಚನೆ ನಡೆಯಿತು ಎಂದರು. ಪ್ರಸಕ್ತ ಜಾಗತಿಕ ಸಂದರ್ಭದಲ್ಲಿ ಮಾರುಕಟ್ಟೆ ಆರ್ಥಿಕತೆ, ಬಹುವಿಧದ ಸಮಾಜಗಳು, ರಾಜಕೀಯ ಪ್ರಜಾಪ್ರಭುತ್ವ ಸೇರಿದಂತೆ ವಿವಿಧ ನೆಲೆಗಳಲ್ಲಿ ಸಹಕಾರ ಬಲವರ್ಧನೆ ಮತ್ತು ಕಾರ್ಯತಂತ್ರ ಬಲಪಡಿಸುವಿಕೆ ಕುರಿತು ಚರ್ಚೆ ನಡೆಯಿತು. ಇದಲ್ಲದೆ ಪ್ರಸಕ್ತ ಯೂರೋಪ್ ಪರಿಸ್ಥಿತಿ, ಉಕ್ರೇನ್ ಸಂಘರ್ಷ, ಪಶ್ಚಿಮ ಏಷ್ಯಾ, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ, ಇಂಡೋ-ಪೆಸಿಫಿಕ್ ವಲಯಗಳ ಬೆಳವಣಿಗೆ ಕುರಿತು ಚರ್ಚೆ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!