ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಅರ್ಹತೆಯನ್ನು ಮರುಪರಿಶೀಲಿಸಲು ಮನೆ ಮನೆ ಸಮೀಕ್ಷೆ ಆರಂಭವಾಗಿದ್ದು, ಬೆಂಗಳೂರಿನ ಬಾಡಿಗೆದಾರರಲ್ಲಿ ತೀವ್ರ ಆತಂಕ ಉಂಟುಮಾಡಿದೆ.
ಈಗಾಗಲೇ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಮನೆ ಮನೆ ತಪಾಸಣೆಗೆ ಆಗಮಿಸಿ ವೋಟರ್ ಐಡಿ, ಆಧಾರ್ ಹಾಗೂ ಮನೆಗೆ ಸಂಬಂಧಿಸಿದ ಪತ್ರಗಳನ್ನು ಕಡ್ಡಾಯವಾಗಿ ನೀಡುವಂತೆ ಕೇಳಿದ್ದಾರೆ. ಆದರೆ ಜುಲೈ 2023 ರ ನಂತರ ಹೊಸದಾಗಿ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಂಡಿರುವ ಗ್ರಾಹಕರಲ್ಲಿ ಈ ನಿಯಮವು ಹೆಚ್ಚಿನ ಆತಂಕವನ್ನು ಸೃಷ್ಟಿಸಿದೆ.
ಅನೇಕ ಬಾಡಿಗೆದಾರರು ತಮಗಿಂತ ಮುಂಚೆ ಆ ಮನೆಯಲ್ಲಿದ್ದ ಹಳೆಯ ಫಲಾನುಭವಿಗಳ ಹೆಸರಿನಲ್ಲೇ ಗೃಹಜ್ಯೋತಿ ಸೌಲಭ್ಯ ಮುಂದುವರಿಯುತ್ತಿರುವುದನ್ನು ಬಳಸಿಕೊಳ್ಳುತ್ತಿದ್ದರು. ನಾವು ಈ ಬಗ್ಗೆ ಮಾಲೀಕರ ಸಹಾಯ ಕೇಳಿದರೂ ಅವರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಈಗ ಅಧಿಕಾರಿಗಳು ಮರುಪರಿಶೀಲನೆಗೆ ಬಂದಾಗ ಹಳೆಯ ಫಲಾನುಭವಿಗಳ ಮೂಲ ದಾಖಲೆಗಳನ್ನು ಒದಗಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ನಮಗೆ ಸಿಗುತ್ತಿದ್ದ ಉಚಿತ ವಿದ್ಯುತ್ ಕಡಿತ ಆಗಬಹುದು, ಎಂದು ಹಲವು ಬಾಡಿಗೆ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.



