ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ಉತ್ಸವದಂತೆ ರೂಪುಗೊಂಡಿದ್ದ ಆರ್ಸಿಬಿ (RCB) ವಿಜಯೋತ್ಸವ, ಕ್ಷಣಾರ್ಧದಲ್ಲಿ ಭೀಕರ ದುರಂತವನ್ನೇ ತಂದೊಡ್ಡಿದೆ. ವಿಧಾನಸೌಧದ ಮೆಟ್ಟಿಲುಗಳಲ್ಲಿ ನಡೆದ ಆತಿಥ್ಯ ಕಾರ್ಯಕ್ರಮದ ನಂತರ, ಸಾವಿರಾರು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದತ್ತ ತೆರಳಿದ್ದು, ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಾಲ್ತುಳಿತ ಉಂಟಾಯಿತು.
ಈ ಕಾಲ್ತುಳಿತ ಪ್ರಕರಣದ ಬಗ್ಗೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ.
“ಇದು ಅತ್ಯಂತ ಬೇಸರದ ಮತ್ತು ನೋವುಂಟುಮಾಡುವ ಘಟನೆ. ಬೆಂಗಳೂರು ಕ್ರೀಡಾಭಿಮಾನಿಗಳ ನಗರ. ನಾನೂ ಇಲ್ಲಿಯವನೆ. ಬೆಂಗಳೂರು ಸ್ಫೋರ್ಟ್ಸ್ ಬಗ್ಗೆ ತುಂಬಾ ಒಲವು ಹೊಂದಿರುವ ನಗರ. ಇಂತಹ ಘಟನೆ ಆಗಿರುವುದು ನಿಜಕ್ಕೂ ಹೃದಯವಿದ್ರಾವಕವಾಗಿದೆ” ಎಂದು ಅವರು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದರು. ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಕಾಲ್ತುಳಿತದ ಪರಿಣಾಮ ರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆ ಏರ್ಪಟ್ಟಿದ್ದು, ಭದ್ರತೆ ವೈಫಲ್ಯ ಹಾಗೂ ತಪ್ಪಾದ ಆಯೋಜನೆಯ ವಿರುದ್ಧ ಕೇಳಿಬರುತ್ತಿರುವ ಆಕ್ರೋಶ ಹೆಚ್ಚುತ್ತಿದೆ. ಹಲವು ಕ್ರೀಡಾ ತಜ್ಞರು ಈ ರೀತಿಯ ಉತ್ಸವಗಳಿಗೆ ಭದ್ರತಾ ವ್ಯವಸ್ಥೆ ಎಷ್ಟು ಮುಖ್ಯ ಎಂಬ ವಿಚಾರವನ್ನು ಎತ್ತಿಹಿಡಿದಿದ್ದಾರೆ.