ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಹೊಡೆತದ ಮೇಲೊಂದು ಹೊಡೆತ ಬೀಳುತ್ತಿದೆ. ಇತ್ತೀಚೆಗೆ ರಾಘವ್ ಚಡ್ಡಾ ಸಹಿತ ಏಳು ಸಂಸದರು ಬಿಜೆಪಿ ಸೇರ್ಪಡೆಯಾಗಿದ್ದು, ಈ ಶಾಕ್ ನಲ್ಲಿರುವ ಆಪ್ ಗೆ ಇದೀಗ ಮತ್ತೊಂದು ಏಟು ಬಿದ್ದಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರ ಸೋದರ ಸಂಬಂಧಿ ಜ್ಞಾನ್ ಸಿಂಗ್ ಮಾನ್ ಕೂಡ ಬಿಜೆಪಿಯತ್ತ ಮುಖಮಾಡಿದ್ದಾರೆ.
ಜ್ಞಾನ್ ಸಿಂಗ್ ಮಾನ್ ಅವರು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಪಂಜಾಬ್ ಬಿಜೆಪಿ ರಾಜ್ಯ ಅಧ್ಯಕ್ಷ ಸುನಿಲ್ ಜಾಖರ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಬಜಿಂದರ್ ಸಿಂಗ್ ಕೂಡ ಬಿಜೆಪಿಗೆ ಸೇರ್ಪಡೆಗೊಂಡರು.
ಈ ವೇಳೆ ಮಾತನಾಡಿದ ಜ್ಞಾನ್ ಸಿಂಗ್, 2014 ರಿಂದ ನಾನು ಭಗವಂತ್ ಮಾನ್ ಅವರ ಜೊತೆ ಇರುವೆ. ಅವರ ಮಾವನ ಮಗನಾಗಿದ್ದೇನೆ. ಆದರೆ ಇಂದಿನ ದಿನಗಳಲ್ಲಿ ಆಪ್ ನೀತಿಗಳು ಹಾಗು ಭ್ರಷ್ಟಾಚಾರದಿಂದ ಬೇಸತ್ತು ಪಕ್ಷ ತೊರೆಯುವ ಅನಿವಾರ್ಯತೆ ಬಂದಿದೆ. ಮುಂದಿನ ದಿನಗಳಲ್ಲಿ ಪಂಜಾಬ್ ನ ಅಭಿವೃದ್ದಿಗಾಗಿ ಬಿಜೆಪಿ ಜೊತೆ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದರು.



