ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆಘಾತಕಾರಿ ಸತ್ಯವೊಂದು ಲಭ್ಯವಾಗಿದೆ. ಕೇತನ್ನನ್ನು ಲೋಹಗಡ್ ಕೋಟೆಯ ಕಂದಕಕ್ಕೆ ತಳ್ಳಿ ಕೊಲೆ ಮಾಡುವ ಮುನ್ನ, ಆತನ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ರಹಸ್ಯ ಪ್ರಿಯಕರ ಚೇತನ್ ಚೌಧರಿ ಸೇರಿ ಬೆಟ್ಟದ ಮೇಲೆ ಭೀಕರ ‘ಕೊಲೆ ಪೂರ್ವಾಭ್ಯಾಸ’ ನಡೆಸಿದ್ದರು ಎಂದು ಪುಣೆ ಪೊಲೀಸರು ದೃಢಪಡಿಸಿದ್ದಾರೆ.
ಲುಲ್ಲಾ ನಗರದ ಬೆಟ್ಟದಲ್ಲಿ ತಾಲೀಮು!
ಕೇತನ್ನನ್ನು ಬೆಟ್ಟದಿಂದ ಹೇಗೆ ತಳ್ಳಬೇಕು, ಎಷ್ಟು ಬಲ ಪ್ರಯೋಗಿಸಬೇಕು ಎಂಬುದನ್ನು ಈ ಇಬ್ಬರು ಆರೋಪಿಗಳು ಪುಣೆಯ ಲುಲ್ಲಾ ನಗರದ ಕ್ಲಬ್ ಬಳಿಯ ತೆರೆದ ಬೆಟ್ಟದ ಪ್ರದೇಶದಲ್ಲಿ ಮುಂಚಿತವಾಗಿಯೇ ತಾಲೀಮು ನಡೆಸಿದ್ದರು. ಇತ್ತೀಚೆಗೆ ಪೊಲೀಸರು ಪ್ರಮುಖ ಆರೋಪಿ ಸಿಯಾಳನ್ನು ಆಕೆ ಪೂರ್ವಾಭ್ಯಾಸ ನಡೆಸಿದ್ದ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ.
ಪ್ರೀತಿಗಾಗಿ ಭಾವಿ ಪತಿಯನ್ನೇ ಮುಗಿಸಿದ ಜೋಡಿ
ಸಿಯಾ ಗೋಯಲ್ ಹಾಗೂ ಚೇತನ್ ಚೌಧರಿ ಇಬ್ಬರೂ ಪ್ರೇಮಿಗಳಾಗಿದ್ದರು. ಆದರೆ ಸಿಯಾಳಿಗೆ ಕೇತನ್ ಅಗರ್ವಾಲ್ ಜೊತೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಅಡ್ಡಿಯಾಗುತ್ತಿದ್ದ ಕೇತನ್ನನ್ನು ಮುಗಿಸಲು ಸ್ಕೆಚ್ ಹಾಕಿದ ಈ ಜೋಡಿ, ಆತನನ್ನು ಲೋಹಗಡ್ ಕೋಟೆಗೆ ಕರೆದೊಯ್ದು ಕಡಿದಾದ ಬಂಡೆಯ ತುದಿಯಿಂದ ಕೆಳಗೆ ತಳ್ಳಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದರು. ಆರಂಭದಲ್ಲಿ ಇದನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು.
ನ್ಯಾಯಾಲಯವು ಇಬ್ಬರೂ ಆರೋಪಿಗಳನ್ನು ಜುಲೈ 3 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮೊಬೈಲ್ ಚಾಟ್ಗಳ ವಿವರಗಳನ್ನು ಕಲೆಹಾಕಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



