ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣವು ಈಗ ಕೇವಲ ಹಣದ ದುರುಪಯೋಗಕ್ಕೆ ಸೀಮಿತವಾಗಿಲ್ಲ. ಇದರ ಹಿಂದೆ ದೊಡ್ಡ ಮಟ್ಟದ ‘ನಕಲಿ ನೇಮಕಾತಿ ದಂಧೆ’ ನಡೆದಿರುವ ಆಘಾತಕಾರಿ ಸುಳಿವು ಸಿಕ್ಕಿದೆ. ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ (SIT) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವರದಿ ಸಲ್ಲಿಸಿದ ಬೆನ್ನಲ್ಲೇ, ಅಯೋಧ್ಯಾ ಪೊಲೀಸರು ಆರೋಪಿಗಳ ಮನೆಗಳ ಮೇಲೆ ಏಕಕಾಲಕ್ಕೆ ಭೀಕರ ದಾಳಿ ನಡೆಸಿದ್ದಾರೆ.
ದಾಖಲೆಗಳೇ ಮಾಯ; ಆಪ್ತರಿಗೆ ಬ್ಯಾಕ್ ಡೋರ್ ಎಂಟ್ರಿ!
ದೇವಾಲಯದ ಕಾಣಿಕೆ ಹಣ ಎಣಿಸಲು ನೇಮಕಗೊಂಡಿದ್ದ ಸಿಬ್ಬಂದಿಯ ಅಧಿಕೃತ ನೇಮಕಾತಿ ಪತ್ರಗಳು ಅಥವಾ ಉದ್ಯೋಗ ಒಪ್ಪಂದದ ಯಾವುದೇ ದಾಖಲೆಗಳು ಪೊಲೀಸರಿಗೆ ಸಿಕ್ಕಿಲ್ಲ. ಸದ್ಯ ಜೈಲು ಪಾಲಾಗಿರುವ ಪ್ರಮುಖ ಆರೋಪಿಗಳಾದ ಲವ್ ಕುಶ್ ಮಿಶ್ರಾ ಮತ್ತು ಅನುಕಲ್ಪ್ ಮಿಶ್ರಾ, ಟ್ರಸ್ಟ್ನ ಉನ್ನತ ಅಧಿಕಾರಿಗಳ ಹತ್ತಿರದ ಸಂಬಂಧಿಕರಾಗಿದ್ದಾರೆ. ಇವರ ಶಿಫಾರಸಿನ ಮೇರೆಗೆ ಕೋಟ್ಯಂತರ ರೂಪಾಯಿ ಲಂಚ ಮತ್ತು ಕಮಿಷನ್ ಪಡೆದು ಬ್ಯಾಕ್ ಡೋರ್ ಎಂಟ್ರಿ ನೀಡಲಾಗಿರುವ ಶಂಕೆ ವ್ಯಕ್ತವಾಗಿದೆ.
80 ಲಕ್ಷ ರೂ. ನಗದು ವಶ; ಎಸ್ಬಿಐಗೂ ತಟ್ಟಿದ ಬಿಸಿ
ಜೂನ್ 25 ರಂದು ಎಫ್ಐಆರ್ ದಾಖಲಾದ ಬಳಿಕ ಈವರೆಗೆ 8 ಜನರನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು 80 ಲಕ್ಷ ರೂಪಾಯಿ ನಗದು ಮತ್ತು ಭಾರಿ ಪ್ರಮಾಣದ ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಗೆ ಸಿಬ್ಬಂದಿ ಪೂರೈಸಿದ ಖಾಸಗಿ ಏಜೆನ್ಸಿಗೂ ಇದಕ್ಕೂ ಸಂಬಂಧವಿಲ್ಲದಿದ್ದರೂ, ಬ್ಯಾಂಕಿನ ವೇತನದಾರರಾಗಿದ್ದುಕೊಂಡು ಕಳ್ಳತನಕ್ಕೆ ಸಾಥ್ ನೀಡಿದ ಸಿಬ್ಬಂದಿ ಹಾಗೂ ಟ್ರಸ್ಟ್ ಅಧಿಕಾರಿಗಳ ನಡುವಿನ ಲಿಂಕ್ ಪತ್ತೆ ಹಚ್ಚಲು ಪೊಲೀಸರು ಬ್ಯಾಂಕ್ ಖಾತೆಗಳನ್ನು ಜಾಲಾಡುತ್ತಿದ್ದಾರೆ.



