ಹೊಸದಿಗಂತ ವರದಿ,ಚಿಕ್ಕಮಗಳೂರು:
ಹುಣ್ಣಿಮೆ ಪೂಜೆ ಅಂಗವಾಗಿ ಬೈಕ್ ಜಾಥಾ ಮೂಲಕ ದತ್ತಪೀಠಕ್ಕೆ ಭೇಟಿ ನೀಡಿದ ಬಿಜೆಪಿ ಕಾರ್ಯಕರ್ತರು ಪಾದುಕೆಗಳಿಗೆ ಪೂಜೆ ಸಲ್ಲಿಸಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು ಎಂದು ಸಂಕಲ್ಪ ಮಾಡಿದರು.
ಪ್ರತಿ ತಿಂಗಳ ಹುಣ್ಣಿಮೆ ದಿನ ವಿಶ್ವಹಿಂದೂ ಪರಿಷತ್-ಬಜರಂಗದಳದ ಕಾರ್ಯಕರ್ತರು ಪೀಠಕ್ಕೆ ತೆರಳಿ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ. ಈ ಬಾರಿ ಹಲವಾರು ಯುವ ಬಿಜೆಪಿ ಕಾರ್ಯಕರ್ತರು ತೆರಳಿ ಪೂಜೆ ಸಲ್ಲಿಸಿರುವುದು ವಿಶೇಷವಾಗಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ನೇತೃತ್ವದಲ್ಲಿ ಸೋಮವಾರ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಸಭೆ ನಡೆಸಿ ಅಲ್ಲಿಂದಲೇ ಬೈಕ್ಗಳನ್ನೇರಿ ಭಾರತ ಮಾತೆ, ಶ್ರೀರಾಮ, ದತ್ತಾತ್ರೇಯರ ಪರ ಘೋಷಣೆಗಳನ್ನು ಕೂಗುತ್ತಾ ದತ್ತಪೀಠಕ್ಕೆ ತೆರಳಿದರು.
ಪೀಠದಲ್ಲಿ ಸರತಿಯಲ್ಲಿ ತೆರಳಿ ಪಾದುಕೆಗಳ ದರ್ಶನ ಪಡೆದರು. ಈ ವೇಳೆ ಅರ್ಚಕರು ಪಾದುಕೆಗಳಿಗೆ ಪೂಜೆ ಸಲ್ಲಿಸಿ ತೀರ್ಥ, ಪ್ರಸಾದ ವಿತರಿಸಿದರು. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎನ್ನುವ ಸಂಕಲ್ಪ ಮಾಡಿ ವಾಪಾಸಾದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೊಷ್ ಕೋಟ್ಯಾನ್, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ತೋಟದಹಳ್ಳಿ ಶಿವಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಸತೀಶ್ ಪುಟ್ಟೇನಹಳ್ಳಿ, ಯುವ ಮೋರ್ಚಾ ನಗರ ಅಧ್ಯಕ್ಷ ರಾಜೇಶ್ ಮುಖಂಡರುಗಳಾದ ನರೇಂದ್ರ, ಬಿಳೇಕಲ್ಲಹಳ್ಳಿ ಪ್ರಕಾಶ್, ಸೇರಿದಂತೆ ಇತರರು ಭಾಗವಹಿಸಿದ್ದರು.