ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು 10 ಕೆಜಿ ಅಕ್ಕಿ ವಿತರಿಸಬೇಕೆಂದು ಆಗ್ರಹಿಸಿ ನಾಳೆ (20-6-2023) ಬೆಂಗಳೂರು ಸೇರಿ 10 ವಿಭಾಗ ಕೇಂದ್ರಗಳಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಂದು ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ. ಹೋರಾಟದ ಕುರಿತು ಚರ್ಚೆ ಮಾಡಿದ್ದೇವೆ ಎಂದು ವಿವರ ನೀಡಿದರು.
ವಿದ್ಯುತ್ ಬಿಲ್ ಹೆಚ್ಚಳ, ಠೇವಣಿ ಹೆಚ್ಚಳ, ಲೋಡ್ ಶೆಡ್ಡಿಂಗ್, ಪಠ್ಯಪುಸ್ತಕ ಏಕಾಏಕಿ ಬದಲಾವಣೆ, ಮತಾಂತರ ನಿಷೇಧ ಕಾಯ್ದೆ ರದ್ದು ಪ್ರಸ್ತಾಪ, ಗೋಹತ್ಯಾ ನಿಷೇಧ ಕಾಯ್ದೆ ಹಿಂದೆಗೆತವನ್ನು ವಿರೋಧಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜುಲೈ 4ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.
ಪಕ್ಷದ ಎಲ್ಲ ಜಿಲ್ಲಾ ಅಧ್ಯಕ್ಷರಿಗೆ ಹಾಗೂ ಮಾಜಿ ಸಚಿವರಿಗೆ ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ನಳಿನ್ಕುಮಾರ್ ಕಟೀಲ್ ಅವರು ಸೂಚನೆಯನ್ನು ಕೊಟ್ಟಿದ್ದಾರೆ. ಸಂಸದರು ಮತ್ತು ಶಾಸಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
‘ಹೇಳಿದ್ದೇನು? ಮಾಡಿದ್ದೇನು?’ ಹೋರಾಟ ಇದಾಗಲಿದೆ. ಎಲ್ಲವೂ ಉಚಿತ ಎಂದಿದ್ದ ಕಾಂಗ್ರೆಸ್ಸಿಗರು ಈಗ ಕಂಡಿಷನ್ಗಳನ್ನು ಹಾಕುತ್ತಿದ್ದಾರೆ. ಕೆಲವಂತೂ ಅನುಷ್ಠಾನಕ್ಕೆ ಸಾಧ್ಯವಿಲ್ಲದ ಕಂಡಿಷನ್ ಹಾಕಿದ್ದಾರೆ ಎಂದು ಟೀಕಿಸಿದರು. ಹಿಂದೆ ಎಲ್ಲ ನಿರುದ್ಯೋಗಿ ಪದವೀಧರ ಯುವಕರಿಗೆ 3 ಸಾವಿರ, ಡಿಪ್ಲೊಮಾ ಪಡೆದು ನಿರುದ್ಯೋಗಿ ಆಗಿರುವವರಿಗೆ 1,500 ರೂ. ಕೊಡುವುದಾಗಿ ತಿಳಿಸಿದ್ದರು. ಈಗ 2022-23ರಲ್ಲಿ ಪದವಿ, ಡಿಪ್ಲೊಮಾ ಪಡೆದು ಆರು ತಿಂಗಳ ಪ್ರಯತ್ನದ ಬಳಿಕವೂ ಉದ್ಯೋಗ ಲಭಿಸದವರು ಎಂದು ಕಂಡಿಷನ್ ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಕಳೆದ ಮೂರ್ನಾಲ್ಕು ವರ್ಷಗಳಿಂದ ಉದ್ಯೋಗ ಸಿಗದೆ ನೊಂದವರು ನಿರುದ್ಯೋಗಿ ಯುವಜನರು. ಈಗ ಪಾಸಾದವರಲ್ಲ; ಈಗ ಪಾಸಾದವರಿಗೂ ಕೊಡಲಿ. ನಮ್ಮ ಅಭ್ಯಂತರ ಏನಿಲ್ಲ. ವಾಸ್ತವವಾಗಿ ನೊಂದವರಿಗೆ ಕೊಡಬೇಕಿತ್ತು. ಇದು ಹಣೆಗೆ ತುಪ್ಪ ಸವರುವ ಕಾರ್ಯ. ಮೂಗಿಗೆ ತುಪ್ಪ ಸವರಿದರೆ ಪ್ರಯತ್ನ ಮಾಡಬಹುದು. ಆ ಥರದ ಒಂದು ಯೋಜನೆ. ಇದರ ವಿರುದ್ಧ ‘ಹೇಳಿದ್ದೇನು, ಮಾಡಿದ್ದೇನು; ನುಡಿದಂತೆ ನಡೆಯದ ಕಾಂಗ್ರೆಸ್ ಸರಕಾರ ಎಂಬ ಹೋರಾಟವನ್ನು ಜಿಲ್ಲಾ ಕೇಂದ್ರ ಮತ್ತು ವಿಧಾನಸಭೆಯ ಒಳಗಡೆ ನಡೆಸಲಿದೆ ಎಂದು ನುಡಿದರು.
ಮತಾಂತರ ನಿಷೇಧ ಕಾಯ್ದೆ ಹಿಂದೆಗೆತವನ್ನು ಖಂಡಿಸಿ ರಾಜ್ಯವ್ಯಾಪಿ ಹೋರಾಟ ರೂಪಿಸುತ್ತೇವೆ. ವಿಧಾನಸಭೆ ಒಳಗಡೆಯೂ ದೊಡ್ಡ ರೀತಿಯ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಆಡಳಿತ ಮಂಡಿಸುವ ಬಿಲ್ ಆಧರಿಸಿ ಹೋರಾಟದ ದಿನಾಂಕವನ್ನು ಪ್ರಕಟಿಸುತ್ತೇವೆ ಎಂದರು. ರಾಜ್ಯದ ಜನರನ್ನು ಒಳಗೊಂಡು ಜೈಲ್ ಭರೋ ಅಥವಾ ಇನ್ಯಾವುದಾದರೂ ದೊಡ್ಡ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.