ಹೊಸದಿಗಂತ ವರದಿ, ವಿಜಯನಗರ:
ಬಿಜೆಪಿ ಜನ ಸಂಕಲ್ಪ ಯಾತ್ರೆ ಹಿನ್ನೆಲೆ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಲಿತರ ಮನೆಯಲ್ಲಿ ಉಪಹಾರ ಸೇವಿಸಿದರು.
ತಾಲೂಕಿನ ಹಿರೇಹಡಗಲಿ ಗ್ರಾಮದ ದಲಿತ ಸಮುದಾಯದ ಹನುಮಂತವ್ವ ಅವರ ನಿವಾಸಕ್ಕೆ ಭೇಟಿ ನೀಡಿ, ಇಡ್ಲಿ, ಚೆಟ್ನಿ ಉಪಹಾರ ಸೇವಿಸಿದರು.
ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷರಾದ ಚೆನ್ನಬಸವನಗೌಡ ಪಾಟೀಲ್, ಮಾಜಿ ಶಾಸಕ ಚಂದ್ರಾ ನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ವೇಳೆ ದುಸ್ಥಿಯಲ್ಲಿದ್ದ ಹನುಮಂತವ್ವ ಅವರ ನಿವಾಸ ಗಮನಿಸಿದ ಸಿ.ಎಂ.ಬಸವರಾಜ್ ಬೊಮ್ಮಾಯಿ ಅವರು, ನವೀಕರಣಗೊಳಿಸಲು ಹಣಕಾಸಿನ ನೆರವು ನೀಡಿ ಎಂದು ಮಾಜಿ ಸಿ.ಎಂ.ಯಡಿಯೂರಪ್ಪ ಅವರು ಸಿ.ಎಂ.ಬೊಮ್ಮಾಯಿ ಅವರಿಗೆ ಹೇಳಿದರು, ಇದಕ್ಕೆ ಸಿ.ಎಂ. ಅವರು ಸಮ್ಮತಿಸಿ ಸರಿ ಮಾಡೋಣ ಎಂದು ಭರವಸೆ ನೀಡಿದರು.