March 14, 2026
Saturday, March 14, 2026
spot_img

ಕರ್ನಾಟಕದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸಂದೇಶ: ಯತ್ನಾಳ್‌ಗೆ ಶಿವಸೇನೆ ಆಹ್ವಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸುವುದಾಗಿ ಶಿವಸೇನೆ ರಾಜ್ಯಾಧ್ಯಕ್ಷ ಆಂದೋಲ ಸಿದ್ಧಲಿಂಗ ಸ್ವಾಮಿಯವರು ತಿಳಿಸಿದ್ದಾರೆ. ಯತ್ನಾಳ್ ಅವರು ಒಪ್ಪಿದರೆ, ಶಿವಸೇನೆ ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ಧವಿರುವುದಾಗಿ ಅವರು ರಾಯಚೂರಿನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

“ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ನಮ್ಮ ಉದ್ದೇಶ ಒಂದೇ. ನಾವು ನಾಳೆ ವಿಜಯಪುರ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಆಗ ಅವರೊಂದಿಗೆ ಮಾತುಕತೆ ನಡೆಸುತ್ತೇವೆ. ಒಂದು ವೇಳೆ ಅವರು ಒಪ್ಪಿಕೊಂಡರೆ, ಒಂದೇ ಪ್ಲಾಟ್‌ಫಾರಂನಲ್ಲಿ ಹೋರಾಟ ಮಾಡೋಣ ಅಂದರೆ ನಾವು ಸಿದ್ಧರಿದ್ದೇವೆ. ಅವರನ್ನ ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ,” ಎಂದು ಸಿದ್ಧಲಿಂಗ ಸ್ವಾಮಿಯವರು ತಿಳಿಸಿದರು.

ಬಿಜೆಪಿ ಮತ್ತು ಶಿವಸೇನೆ ಎರಡೂ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತವೆ ಎಂದು ಸ್ಪಷ್ಟಪಡಿಸಿದ ಅವರು, “ಶಿವಸೇನೆ, ಬಿಜೆಪಿ ಬೇರೆ ಅಲ್ಲ. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಸರ್ಕಾರವಿದೆ. ರಾಜ್ಯದಲ್ಲಿ ಹಿಂದೂಗಳ ಮತ ಒಡೆಯದಂತೆ ಸಂಘಟನೆ ಮಾಡುತ್ತೇವೆ,” ಎಂದರು. ಶಿವಸೇನೆ ಮತ್ತು ಬಿಜೆಪಿ ಹೈಕಮಾಂಡ್‌ನ ನಿರ್ಣಯದಂತೆ ಕರ್ನಾಟಕದಲ್ಲಿ ಮುಂದುವರಿಯುವುದಾಗಿ ಅವರು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !