ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭಾ ಚುನಾವಣೆಯ ಕಾಮರೆಡ್ಡಿ ಕ್ಷೇತ್ರದಲ್ಲಿ ಅಚ್ಚರಿದಲ್ಲಿ ಹಾಲಿ ಸಿಎಂ ಚಂದ್ರಶೇಖರ್ ರಾವ್ ಹಾಗೂ ಕಾಂಗ್ರೆಸ್ನ ಸಿಎಂ ಹುದ್ದೆಯ ಆಕಾಂಕ್ಷಿ, ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ವಿರುದ್ಧ ಬಿಜೆಪಿಯ ಅಭ್ಯರ್ಥಿ ವೆಂಕಟರಮಣ ರೆಡ್ಡಿ ಗೆಲುವು ಸಾಧಿಸಿದ್ದಾರೆ.
ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆಯ ಚುನಾವಣಾ ಫಲಿತಾಂಶ ಬಹುತೇಕ ಹೊರಬಂದಿದೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಆರ್ಎಸ್ ಸೋಲಿನ ಸುಳಿಗೆ ಸಿಲುಕಿದೆ. ಕಾಂಗ್ರೆಸ್ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರಚನೆಯಾದ ಬಳಿಕ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿದೆ.
ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಿಎಂ ಕೆಸಿಆರ್ ಹಾಗೂ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರೇವಂತ್ ರೆಡ್ಡಿ ಸ್ಪರ್ಧೆಯಿಂದ ಹೆಚ್ಚು ಮಹತ್ವ ಪಡೆದಿದೆ. ಇಬ್ಬರು ಉನ್ನತ ನಾಯಕರ ವಿರುದ್ಧ ಬಿಜೆಪಿಯಿಂದ ವೆಂಕಟರಮಣ ರೆಡ್ಡಿ ಕಣಕ್ಕೆ ಇಳಿದಿದ್ದರು. ಇದುವರೆಗೆ ರೇವಂತ್ ರೆಡ್ಡಿ ಮುನ್ನಡೆಯಲ್ಲಿದ್ದರು. ಆದರೆ, ಕೊನೆಯಲ್ಲಿ ಕಮಲ ಪಕ್ಷದ ಅಭ್ಯರ್ಥಿಗೆ ಅಚ್ಚರಿ ತಿರುವು ಸಿಕ್ಕಿದ್ದು, ವೆಂಕಟರಮಣ ರೆಡ್ಡಿ 3,544 ಮುನ್ನಡೆ ಸಾಧಿಸಿದ್ದಾರೆ. ರೇವಂತ್ ರೆಡ್ಡಿ ಎರಡನೇ ಸ್ಥಾನ ಹಾಗೂ ಸಿಎಂ ಕೆಸಿಆರ್ ಮೂರನೇ ಸ್ಥಾನಕ್ಕೆ ಜಾರಿದ್ದಾರೆ.
ಮತ್ತೊಂದೆಡೆ, ರೇವಂತ್ ರೆಡ್ಡಿ ಕೊಡಂಗಲ್ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಕೆಸಿಎರ್ ಸಹ ಗಜ್ವೆಲ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ಅವರು ಮುನ್ನಡೆ ಸಾಧಿಸಿದ್ದಾರೆ.