ಹೊಸದಿಗಂತ, ಮಡಿಕೇರಿ:
ಕೊಡಗು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ನಕ್ಸಲರು ಸಂಚರಿಸಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸರು ಅಲರ್ಟ್ ಆಗಿದ್ದು, ಗಡಿ ಭಾಗದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ.
ಪುಷ್ಪಗಿರಿ ಪರ್ವತ ಶ್ರೇಣಿಯ ತಪ್ಪಲಲ್ಲಿರುವ ಕೂಜಿಮಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರದೇಶವನ್ನು ಹೊಂದಿದ್ದು, ಕಡಮಕಲ್ ಮೂಲಕ ಕೊಡಗಿನ ವಣಚಲು, ಗಾಳಿಬೀಡು, ಕಾಲೂರು ಗ್ರಾಮಗಳನ್ನು ಸುಲಭವಾಗಿ ತಲುಪಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಕಳದಿಂದ ಬಂದಿರುವ ನಕ್ಸಲ್ ನಿಗ್ರಹ ದಳ ಕೂಂಬಿಂಗ್ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಕೂಡಾ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುವುದರೊಂದಿಗೆ ಗಡಿಯಲ್ಲಿ ಕಟ್ಡೆಚ್ಚರವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಮಕಲ್ಲು ಬಳಿಯ ಕೂಜಿಮಲೆಯಲ್ಲಿ ಇಬ್ಬರು ಮಹಿಳೆಯರು ಒಳಗೊಂಡಂತೆ ನಾಲ್ಕೈದು ಮಂದಿಯಿದ್ದ ನಕ್ಸಲರ ತಂಡ ಶನಿವಾರ ಸಂಜೆ ಕಾಣಿಸಿಕೊಂಡಿರುವುದಾಗಿ ಹೇಳಲಾಗಿದೆ. ಜೊತೆಗೆ ಶನಿವಾರ ಸಂಜೆ ಕಡಮಕಲ್ಲು ಭಾಗದ ಅಂಗಡಿಯೊಂದಕ್ಕೆ ಆಗಮಿಸಿದ ಅಪರಿಚಿತರು ಅರಣ್ಯ ಇಲಾಖೆಯ ಹೆಸರಿನಲ್ಲಿ ದಿನಸಿ ಸಾಮಾಗ್ರಿ ಖರೀದಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಅಂಗಡಿಗೆ ಭೇಟಿ ನೀಡಿದಾಗ ಈ ವಿಚಾರ ಬೆಳಕಿಗೆ ಬಂದಿದ್ದು, ಈ ಪ್ರಕರಣ ನಕ್ಸಲರ ಸಂಚಾರದ ಕುರಿತು ಶಂಕೆ ವ್ಯಕ್ತವಾಗಿದೆ.