ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಸುರಕ್ಷತೆಗೆ ಕಂಟಕವಾಗಿದ್ದ ಉಗ್ರಗಾಮಿಗಳ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಶನಿವಾರ ಮತ್ತೊಂದು ದೂಳಿಪಟ ಕಾರ್ಯಾಚರಣೆ ನಡೆಸಿದೆ. ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ, ಜಮಾತ್-ಉದ್-ದಾವಾ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಗಳ ಬೆನ್ನೆಲುಬಾಗಿದ್ದ ಬರೋಬ್ಬರಿ 23 ಜನರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಸೆಕ್ಷನ್ 35ರ ಅಡಿಯಲ್ಲಿ ‘ಘೋಷಿತ ಭಯೋತ್ಪಾದಕರು’ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಉಗ್ರರ ಕರಾಳ ಸಂಚು ಮತ್ತು ದಾಳಿಗಳು
ಭಾರತದ ವಿವಿಧೆಡೆ ನಡೆದ ಭೀಕರ ದಾಳಿಗಳ ಹಿಂದೆ ಈ 23 ಜನರ ಕೈವಾಡವಿರುವುದು ಸಾಬೀತಾಗಿದೆ. ಪ್ರಮುಖವಾಗಿ 2016ರ ನಗ್ರೋಟಾ ಸೇನಾ ಶಿಬಿರದ ಮೇಲಿನ ದಾಳಿ ಹಾಗೂ 2022ರ ಸುಂಜ್ವಾನ್ ಭದ್ರತಾ ಪಡೆಗಳ ಮೇಲಿನ ದಾಳಿಯ ಮಾಸ್ಟರ್ಮೈಂಡ್ಗಳು ಇವರಾಗಿದ್ದಾರೆ. ಕೇವಲ ದಾಳಿಯಷ್ಟೇ ಅಲ್ಲದೆ, ಡ್ರೋನ್ಗಳ ಮೂಲಕ ಗಡಿಯಲ್ಲಿ ಶಸ್ತ್ರಾಸ್ತ್ರ ಸರಬರಾಜು, ಯುವಕರ ನೇಮಕಾತಿ ಹಾಗೂ ಉಗ್ರರಿಗೆ ಆರ್ಥಿಕ ನೆರವು ನೀಡುವ ಜಾಲದಲ್ಲಿ ಇವರು ಸಕ್ರಿಯರಾಗಿದ್ದರು.
NIA ಕಣ್ಗಾವಲು: ಆಸ್ತಿಪಾಸ್ತಿ ಮುಟ್ಟುಗೋಲು
2019ರ ಯುಎಪಿಎ ಕಾಯ್ದೆಯ ತಿದ್ದುಪಡಿಯ ಅನ್ವಯ, ಕೇಂದ್ರ ಸರ್ಕಾರಕ್ಕೆ ಸಂಘಟನೆಗಳ ಜೊತೆಗೆ ವೈಯಕ್ತಿಕವಾಗಿಯೂ ಉಗ್ರರನ್ನು ಬ್ಯಾನ್ ಮಾಡುವ ಅಧಿಕಾರ ಸಿಕ್ಕಿದೆ. ಇದರ ಬೆನ್ನಲ್ಲೇ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈ 23 ಭಯೋತ್ಪಾದಕರ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಮುಂದಾಗಿದೆ. ಅಲ್ಲದೆ, ಇವರ ಶಸ್ತ್ರಾಸ್ತ್ರ ಖರೀದಿಗೆ ಬ್ರೇಕ್ ಹಾಕಿ, ಭಾರತದಲ್ಲಿರುವ ಇವರ ಸಂಪೂರ್ಣ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು (Seize) ಹಾಕಿಕೊಳ್ಳಲು ಕಠಿಣ ಕಾನೂನು ಕ್ರಮ ಕೈಗೊಂಡಿದೆ.



