ಹೊಸದಿಗಂತ ವರದಿ,ನಾಪೋಕ್ಲು:
ತರಕಾರಿ ತರಲೆಂದು ತೆರಳಿದ್ದ ಕೊಡಗಿನ ಯುವಕನೊಬ್ಬ ಕೇರಳದ ಮಾನಂದವಾಡಿಯ ಬಾವಲಿ ಎಂಬಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸ್ಥಳೀಯ ಚೆರಿಯಪರಂಬು ನಿವಾಸಿ ಎಂ. ಎಂ. ಹಂಸ ಎಂಬವರ ಪುತ್ರ ಸಂಶುದ್ದೀನ್ (28) ಮೃತ ದುರ್ದೈವಿ.
ಮೂರು ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಪಿಕಪ್ ವಾಹನದಲ್ಲಿ ತರಕಾರಿ ತರಲೆಂದು ಕೇರಳದ ಮಾನಂದವಾಡಿಗೆ ತೆರಳಿದ್ದರು ಎನ್ನಲಾಗಿದೆ.
ಆದರೆ ಶನಿವಾರ ಸಂಶುದ್ದೀನ್ ಅವರ ಮೃತ ದೇಹ ಕರ್ನಾಟಕ-ಕೇರಳ ಗಡಿ ಭಾಗವಾಗಿರುವ ಮಾನಂದವಾಡಿಯ ಬಾವಲಿ ಎಂಬಲ್ಲಿ ಹೊಳೆಯಲ್ಲಿ ಗೋಚರಿಸಿದ್ದು, ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಆದರೆ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮಾನಂದವಾಡಿ ಸುಲ್ತಾನ್ ಬತ್ತೇರಿ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಶವ ಪರೀಕ್ಷೆ ಮಾಡಲಾಗುತ್ತಿದ್ದು, ಆ ಬಳಿಕ ಸಂಶುದ್ದೀನ್ ಅವರ ಮೃತ ದೇಹವನ್ನು ನಾಪೋಕ್ಲು ಚೆರಿಯಪರಂಬುವಿಗೆ ತರಬೇಕಾಗಿದೆ ಎಂದು ಪೆರಿಯಪರಂಬು ನಿವಾಸಿ ಪಿ.ಎ.ಸಿರಾಜ್ ತಿಳಿಸಿದ್ದಾರೆ.
ಮಾನಂದವಾಡಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಂಡಿದ್ದಾರೆ.