ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ ಎಂದು ಅಧಿಕಾರಪಕ್ಷದ ವಾದ. ಆದರೆ, ಈ ಯೋಜನೆಗಳ ಮೇಲೆ ವಿರೋಧ ಪಕ್ಷಗಳಿಂದ ಮಾತ್ರವಲ್ಲ, ಕಾಂಗ್ರೆಸ್ನ ಹಿರಿಯ ನಾಯಕರಿಂದಲೂ ವ್ಯಂಗ್ಯ ಕೇಳಿ ಬರುತ್ತಿದೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಶಿರೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಶಕ್ತಿ ಯೋಜನೆಯ ಬಗ್ಗೆ ಅಪಹಾಸ್ಯ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ.
“ಇಂದು ಗಂಡು ಮಕ್ಕಳಿಗೆ ಬಸ್ನಲ್ಲಿ ಹತ್ತಲು ಅವಕಾಶವಿಲ್ಲ. ಬಸ್ಗಳೆಲ್ಲ ಮಹಿಳೆಗಳಿಂದ ತುಂಬಿರುತ್ತವೆ,” ಎಂದು ವ್ಯಂಗ್ಯವಾಡಿದರು. ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ನೀಡಲಾಗುತ್ತಿದೆ. ಗಂಡು ಮಕ್ಕಳಿಗೆ ಬಸ್ನಲ್ಲಿ ಹತ್ತಲು ಆಗುತ್ತಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ, ರಾಜಕೀಯ ವಲಯದಲ್ಲಿ ಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಳಿಕ ಮಾತು ಬದಲಿಸಿದ ದೇಶಪಾಂಡೆ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರು, ರೈತರು, ಬಡವರ ಪಾಲಿಗೆ ಬಹಳ ಅನುಕೂಲವಾಗಿವೆ ಎಂದು ಶ್ಲಾಘಿಸಿದರು. ಈ ಯೋಜನೆಗಳಿಗೆ 58,000 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.