ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರದೇಶ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಬುಲ್ಡೋಜರ್ ಸದ್ದು ಕೇಳಿದೆ.
ಕಳೆದ ವಾರ ಬಿಜೆಪಿ ಮುಖಂಡನ ಮೇಲೆ ದಾಳಿ ಮಾಡಿ ಕೈ ಕತ್ತರಿಸಿದ ಆರೋಪಿ ಫಾರುಖ್ ರೈನೆ ಅಲಿಯಾಸ್ ಮಿನ್ನೈ ಮನೆ ಮೇಲೆ ಬುಲ್ಡೋಜರ್ ಹತ್ತಿಸಲಾಗಿದೆ. ಪ್ರಮುಖ ಆರೋಪಿ ಮನೆಯನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ.
ಈ ಮೂಲಕ ರೌಡಿಸಂ, ದಾಳಿ ಮಾಡುವ ಪುಡಿ ರೌಡಿಗಳಿಗೆ ನೂತನ ಸಿಎಂ ಮೋಹನ್ ಯಾದವ್(Mohan yadav) ಖಡಕ್ ಎಚ್ಚರಿಕೆ ನೀಡಿದ್ದಾರೆ
ಮೋಹನ್ ಯಾದವ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ ನಿಷೇಧಿಸುವ ಆದೇಶ ಹೊರಡಿಸಿ ಭಾರಿ ಸಂಚಲನ ಸೃಷ್ಟಿಸಿದ್ದರು.
ಇದೀಗ ಮುಖ್ಯಮಂತ್ರಿಯಾದ ಎರಡನೇ ದಿನಕ್ಕೆ ಮಧ್ಯಪ್ರದೇಶದಲ್ಲಿ (Madhya Pradesh) ಬುಲ್ಡೋಜರ್ ಸದ್ದು ಮಾಡಲು ಆರಂಭಿಸಿದೆ.
ಕಳೆದ ವಾರ ಬಿಜೆಪಿ ಮಂಡಲ ಮಟ್ಟದ ನಾಯಕ ದೇವೇಂದ್ರ ಠಾಕೂರ್ ಮೇಲೆ ಭೀಕರ ದಾಳಿ ನಡೆದಿತ್ತು. ಫಾರೂಖ್ ರೈನೆ ಸೇರಿದಂತೆ ನಾಲ್ವರು ಆರೋಪಿಗಳು ಮಚ್ಚಿನಿಂದ ಅಟ್ಟಾಡಿಸಿಕೊಂಡು ದಾಳಿ ಮಾಡಿದ್ದರು. ಮಚ್ಚು ಬೀಸುತ್ತಿದ್ದಂತೆ ಪ್ರಾಣ ಉಳಿಸಿಕೊಳ್ಳಲು ದೇವೇಂದ್ರ ಠಾಕೂರ್ ಕೈ ಅಡ್ಡ ಹಿಡಿದಿದ್ದರು. ಹೀಗಾಗಿ ದಾಳಿಯಲ್ಲಿ ದೇವೇಂದ್ರ ಠಾಕೂರ್ ಕೈ ತುಂಡಾಗಿತ್ತು. ದೇವೇಂದ್ರ ಠಾಕೂರ್ ನೆಲಕ್ಕೆ ಕುಸಿಯುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು.ಪೊಲೀಸ್ ಠಾಣೆ ಎದುರು ಬಿಜೆಪಿ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದ್ದರು. ಇತ್ತ ಸಿಎಂ ಆಗಿ ಅಧಿಕಾರವಹಿಸಿದ ಮರುದಿನವೇ ಮೋಹನ್ ಯಾದವ್ ಪೊಲೀಸರು ನೀಡಿದ ವರದಿ ಆಧರಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ.
ನಾಲ್ವರು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಫಾರೂಖ್ ರೈನೆ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಲಾಗಿದೆ. ನ್ಯಾಷನಲ್ ಸೆಕ್ಯೂರಿಟಿ ಆ್ಯಕ್ಟ್(NSA)ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಭೋಪಾಲ್ ಜಿಲ್ಲಾಧಿಕಾರಿ, ಭಾರಿ ಪೊಲೀಸ್ ಭದ್ರತೆಯೊಂದಿಗೆ ಆರೋಪಿ ಮನೆ ಧ್ವಂಸ ಮಾಡಲಾಗಿದೆ.
ಮಧ್ಯಪ್ರದೇಶದ ನೂತನ ಸಿಎಂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನೇ ಮೀರಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.