ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹಜ್ಯೋತಿ ಯೋಜನೆ ಕುರಿತು ಜನರಲ್ಲಿರುವ ಗೊಂದಲಗಳ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಸಚಿವರು, ಹಿಂದಿನ ಸರ್ಕಾರದ ವಿದ್ಯುತ್ ದರ ಏರಿಕೆ ಆದೇಶ ಇದೀಗ ಜಾರಿಯಾಗಿದೆ. ಕೆಇಆರ್ಸಿ ಒಮ್ಮೆ ಆದೇಶ ಮಾಡಿದರೆ ಹಿಂಪಡೆಯಲು ಆಗುವುದಿಲ್ಲ ಎಂದು ಹೇಳಿದರು.
ಆದ್ರೆ ಗೃಹಜ್ಯೋತಿ ಯೋಜನೆ ಜಾರಿ ಹೊರೆಯನ್ನು ಗ್ರಾಹಕರ ಮೇಲೆ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇವಲ ಅಧಿಕಾರಿಗಳು ವಿದ್ಯುತ್ ಏರಿಕೆ ವಿಚಾರವನ್ನು ನಿರ್ಧರಿಸುವುದಿಲ್ಲ. ಸಿಎಂ, ಇಂಧನ ಇಲಾಖೆ ಸಚಿವರು ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತಾರೆ. ನಾವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಕೆಇಆರ್ಸಿ ಮೇಲೆ ಹಾಕಲ್ಲ. ಹಿಂದಿನ ಬಿಲ್ ಪಾವತಿಸಲು ಗ್ರಾಹಕರಿಗೆ 3 ತಿಂಗಳ ಕಾಲಾವಕಾಶವಿದೆ ಎಂದು ಹೇಳಿದರು.
ಹೊಸತಾಗಿ ಮನೆ ನಿರ್ಮಾಣ ಮತ್ತು ಮನೆ ಬದಲಾವಣೆ ವಿಚಾರವಾಗಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಚರ್ಚೆಯಾಗಿದೆ. ಅಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯ ಜೊತೆಗೂ ಚರ್ಚೆ ಮಾಡಲಾಗಿದೆ. ಹೊಸತಾಗಿ ಮನೆ ನಿರ್ಮಾಣ ಮಾಡಿದವರಿಗೆ 58 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ಯಾರು ಹೊಸದಾಗಿ ಮನೆಗೆ ಬರುತ್ತಾರೆ ಅವರಿಗೆ ದಾಖಲೆ ಇರುವುದಿಲ್ಲ.ಅವರಿಗೆ ಸರಾಸರಿ 53 +10 ಶೇ ವರೆಗೆ ಉಚಿತವಾಗಿ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿದರು.
58 ಯೂನಿಟ್ ವರೆಗೂ ವಿದ್ಯುತ್ ಉಚಿತ ಆಗಲಿದೆ. ಹೊಸ ಮನೆಯವರಿಗೆ ಕೂಡ ಇದೇ ಯೂನಿಟ್ ಅನ್ವಯ ಆಗಲಿದೆ. ವಿದ್ಯುತ್ ಬಳಕೆ ಕುರಿತಾಗಿ ಒಂದು ವರ್ಷದವರೆಗೂ ಲೆಕ್ಕಾಚಾರ ಪಡೆದುಕೊಳ್ಳಲು ಆಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.