ಹೊಸದಿಗಂತ ಡಿಜಿಟಲ್ ಡೆಸ್ಕ್:
ಅವಘಡಗಳು ಸಂಭವಿಸುತ್ತದೆ ಎಂಬ ಕಾರಣಕ್ಕಾಗಿ ದೇವಸ್ಥಾನಗಳ ಉತ್ಸವಗಳಲ್ಲಿ ಸುಡುಮದ್ದು ಪ್ರದರ್ಶನ ನಿಷೇಧಿಸುವುದು ರಸ್ತೆ ಅಪಘಾತದ ನಂತರ ರಸ್ತೆ ಸಂಚಾರ ನಿಷೇಧಿಸಿದಂತೆ ಎಂದು ಕೇರಳ ಹೈಕೋರ್ಟ್ ಹೇಳಿದ್ದು, ಪೋಲೀಸ್, ಅಗ್ನಿಶಾಮಕ ದಳ, ರಾಜ್ಯದ ಆಡಳಿತದ ಮೇಲ್ವಿಚಾರಣೆಯಲ್ಲಿ ಕಟ್ಟುನಿಟ್ಟಿನ ಷರತ್ತುಗಳ ಅಡಿಯಲ್ಲಿ ಸುಡುಮದ್ದು ಪ್ರದರ್ಶನದಂತಹ ಆಚರಣೆಗಳಿಗೆ ಅವಕಾಶ ನೀಡಬೇಕು ಎಂದು ನ್ಯಾಯಮೂರ್ತಿ ಪಿ.ವಿ. ಕುಂಞಿಞ ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ತ್ರಿಶೂರ್ ಅರಾಟುಪುಳ ಪೂರಂ, ಪಾಲಕ್ಕಾಡ್ ಕವಸ್ಸೇರಿ ಪೂರಂಗಾಗಿ ಸುಡುಮದ್ದು ಬಳಸಲು ಅನುಮತಿ ನಿರಾಕರಿಸಿದ ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ದೇವಸ್ಥಾನದ ಅಧಿಕಾರಿಗಳು ಹೈಕೋರ್ಟ್ಗೆ ಮೊರೆಹೋಗಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಈ ಅಭಿಪ್ರಾಯ ನೀಡಿದೆ.
ಜ್ಲಿಲಾಧಿಕಾರಿ ಆದೇಶವು ಸುರಕ್ಷತೆಯ ಕುರಿತಾಗಿದ್ದು, ಇನ್ನು ಕೆಲವು ದೇವಸ್ಥಾನಗಳಲ್ಲಿ ಸುಡುಮದ್ದು ಸಿಡಿಸುವ ವೇಳೆ ಕೆಲವು ಅವಘಡಗಳು ಸಂಭವಿಸಿರುವುದು ಗೊತ್ತಾಗಿದೆ. ಈ ಎರಡು ದೇವಾಲಯಗಳಲ್ಲಿ ಪೂರಂ ಹಬ್ಬ, ಸುಡಿಮದ್ದು ಪ್ರದರ್ಶನ ಆಚರಣೆಗಳ ಭಾಗ ಎಂಬುದು ಒಪ್ಪಿಕೊಳ್ಳುವ ಸತ್ಯ. ಸುಡುಮದ್ದು ಸಿಡಿಸುವ ವೇಳೆ ಯಾವುದೇ ಅನಾಹುತ ಸಂಭವಿಸಿದರೆ ಅದು ಪೋಲೀಸ್, ಅಗ್ನಿಶಾಮಕ ಇಲಾಖೆ, ಸ್ಪೋಟಕ ನಿಯಂತ್ರಣ ಇಲಾಖೆ ಸೇರಿದಂತೆ ಆಡಳಿತ ಹೊಣೆಯಾಗುತ್ತದೆ.
ಇಂತಹ ಘಟನೆಗಳನ್ನು ತಡೆಗಟ್ಟುವ ಸಲುವಾಗಿ, ಆಡಳಿತ ಮತ್ತು ಅದರ ಸಂಸ್ಥೆಗಳು ದೇವಾಲಯದ ಉತ್ಸವಗಳಲ್ಲಿ ನಿಯಮಿತವಾಗಿ ಸುಡುಮದ್ದು ಪ್ರದರ್ಶಿಸಲು ಕಠಿಣ ಷರತ್ತುಗಳನ್ನು ವಿಧಿಸಬಹುದು. ಧಾರ್ಮಿಕ ದೇವಾಲಯದ ಉತ್ಸವಗಳಿಗೆ ಸಂಬಂಧಿಸಿದ ಸುಡುಮದ್ದುಗಳನ್ನು ರಾಜ್ಯ ಮತ್ತು ಅದರ ಕಾರ್ಯವಿಧಾನಗಳ ಮೇಲ್ವಿಚಾರಣೆಯಲ್ಲಿ ಕಟ್ಟುನಿಟ್ಟಾದ ಷರತ್ತುಗಳಿಗೆ ಒಳಪಟ್ಟು ಮುಂದುವರಿಸಲು ಅನುಮತಿಸಬೇಕು ಎಂದು ನ್ಯಾಯಾಲಯ ಇದೇ ಸಂದರ್ಭ ಹೇಳಿದೆ.