ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ತಿ ವಿಚಾರವಾಗಿ ಮೊಮ್ಮಗನೇ ಅಜ್ಜನನ್ನು ಇರಿದು ಬರ್ಬರವಾಗಿ ಹತ್ಯೆ ಮಾಡಿರುವದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ತೆಲಂಗಾಣದ ವೆಲ್ಜನ್ ಗ್ರೂಪ್ನ ಮಾಲೀಕ ವೆಲಮತಿ ಚಂದ್ರಶೇಖರ ಜನಾರ್ದನ ರಾವ್ (86) ಮೊಮ್ಮಗನಿಂದಲೇ ಹತ್ಯೆಯಾದ ಉದ್ಯಮಿ.
ಇತ್ತೀಚೆಗೆ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಭಾರತಕ್ಕೆ ಮರಳಿದ್ದ ಕೀರ್ತಿತೇಜ (29), ಗುರುವಾರ ರಾತ್ರಿ ತನ್ನ ತಾಯಿ ಸರೋಜಿನಿಯವರೊಂದಿಗೆ ಜನಾರ್ದನ್ ಅವರ ಮನೆಗೆ ಬಂದಿದ್ದಾನೆ. ಈ ವೇಳೆ ಆಸ್ತಿ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಚಾಕುವಿನಿಂದ ತಾತನಿಗೆ ಇರಿದಿದ್ದಾನೆ. ತಡೆಯಲು ಬಂದ ತಾಯಿಗೂ ಚೂರಿಯಿಂದ ಇರಿದಿದ್ದಾನೆ.
ಸರೋಜಿನಿ ದೇವಿಗೆ ನಾಲ್ಕು ಬಾರಿ ಇರಿಯಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ಕೀರ್ತಿ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಆರೋಪಿ ಕೀರ್ತಿ ತೇಜ ವಿಸಿ ಜನಾರ್ದನ ರಾವ್ ಅವರ ಕಿರಿಯ ಮಗಳ ಪುತ್ರ. ಜನಾರ್ಧನ್ ರಾವ್ ಇತ್ತೀಚೆಗೆ ತಮ್ಮ ಹಿರಿಯ ಮಗಳ ಪುತ್ರ ಶ್ರೀಕೃಷ್ಣ ಅವರನ್ನು ತಮ್ಮ ವ್ಯವಹಾರದ ಗ್ರೂಪ್ ನಿರ್ದೇಶಕರನ್ನಾಗಿ ನೇಮಿಸಿದ್ದರು. ಇದರಂತೆ ಕಂಪನಿಯ 4 ಕೋಟಿ ಮೌಲ್ಯದ ಷೇರುಗಳನ್ನು ನೀಡಲಾಗಿತ್ತು. ಈ ನಡೆ ವೈಮನಸ್ಸಿಗೆ ಕಾರಣವಾಗಿತ್ತು ಎಂದು ವರದಿಗಳಿಂದ ತಿಳಿದುಬಂದಿದೆ.