ಮತ್ತೆ ಭಾರತ ವಿರೋಧಿ ನಿಲುವು ತಾಳಿದ ಕೆನಡಾ: ಕನ್ನಡಿಗ ಚಂದ್ರ ಆರ್ಯಗೆ ಕೈತಪ್ಪಿದ ಟಿಕೆಟ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೆನಡಾ ಮತ್ತೊಮ್ಮೆ ತನ್ನನ್ನು ತಾನು ಭಾರತದ ವಿರೋಧಿ ಎಂದು ಸಾಬೀತು ಪಡಿಸಿದೆ. ಕೆನಡಾದಲ್ಲಿ ಅಧಿಕಾರದಲ್ಲಿರುವ ಲಿಬರಲ್ ಪಕ್ಷವು, ಖಾಲಿಸ್ತಾನಿ ಚಟುವಟಿಕೆಗಳ ವಿರುದ್ಧ ದೃಢವಾದ ನಿಲುವು ತಾಳಿದ್ದ ಕರ್ನಾಟಕ ಮೂಲದ ಸಂಸದ ಚಂದ್ರ ಆರ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್​ ಕೊಡಲು ನಿರಾಕರಿಸಿದೆ.

ಈ ಕುರಿತು ಚಂದ್ರ ಆರ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ, ನೇಪಿಯನ್ ಕ್ಷೇತ್ರದಿಂದ ತಮ್ಮ ಅಭ್ಯರ್ಥಿತ್ವವನ್ನು ಪಕ್ಷವು ರದ್ದುಗೊಳಿಸಿದೆ ಎಂದು ತಿಳಿಸಿದ್ದಾರೆ. ಮುಂದುವರಿದು, ಸಂಸದನಾಗಿ ಸೇವೆ ಸಲ್ಲಿಸುವುದು ನನ್ನ ಜೀವನದ ಜವಾಬ್ದಾರಿ ಎಂದು ಹೇಳಿದ್ದಾರೆ.

ಜನವರಿಯಲ್ಲಿ ನಡೆದ ಪಕ್ಷದ ನಾಯಕತ್ವ ಚುನಾವಣೆಗೆ ಅವರ ಅಭ್ಯರ್ಥಿತ್ವವನ್ನು ತಿರಸ್ಕರಿಸಿದಾಗಲೂ ಪಕ್ಷವು ಯಾವುದೇ ಮಾಹಿತಿಯನ್ನು ಒದಗಿಸಿರಲಿಲ್ಲ. ಚಂದ್ರ ಆರ್ಯ ಅವರು ಹಂಚಿಕೊಂಡ ಪಕ್ಷದ ಅಧಿಕೃತ ಪತ್ರದಲ್ಲಿ, ಪಕ್ಷದ ರಾಷ್ಟ್ರೀಯ ಪ್ರಚಾರ ಸಹ-ಅಧ್ಯಕ್ಷರು, ಆರ್ಯ ಅವರ ಅರ್ಹತೆಯ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ, ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ಅವರ ಅಭ್ಯರ್ಥಿತ್ವವನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ. ಈ ಶಿಫಾರಸನ್ನು ಪಕ್ಷವು ಅಂಗೀಕರಿಸಿದೆ ಎಂದು ತಿಳಿಸಲಾಗಿದೆ.

ಕೆನಡಾದಲ್ಲಿ ಪ್ರಸ್ತುತ ರಾಜಕೀಯ ವರ್ಗದಲ್ಲಿ ಖಲಿಸ್ತಾನಿ ವಿರೋಧಿಯಾಗಿ ಚಂದ್ರ ಆರ್ಯ ಅವರು ಗುರುತಿಸಿಕೊಂಡಿದ್ದಾರೆ. ಈ ವರ್ಷದ ಜನವರಿಯಲ್ಲಿ, ಆಡಳಿತಾರೂಢ ಲಿಬರಲ್ ಪಕ್ಷದ ಮುಂದಿನ ನಾಯಕನನ್ನು ಆಯ್ಕೆ ಮಾಡುವ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅವರನ್ನು ತಡೆಯಲಾಗಿತ್ತು. ಆರ್ಯ ಅವರು ಕೆನಡಾ ಮತ್ತು ಇತರೆ ಪ್ರದೇಶಗಳಲ್ಲಿ ಖಾಲಿಸ್ತಾನಿ ಚಟುವಟಿಕೆಗಳ ವಿರುದ್ಧ ತಮ್ಮ ನಿಲುವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದರು. ಅಕ್ಟೋಬರ್‌ನಲ್ಲಿ, ಅಮೆರಿಕ ಮೂಲದ ಖಾಲಿಸ್ತಾನಿ ಉಗ್ರ ಗುರಪತ್‌ವಂತ್ ಸಿಂಗ್ ಪನ್ನುನ್, ಭಾರತೀಯ ರಾಜತಾಂತ್ರಿಕರನ್ನು ಗುರಿಯಾಗಿಸಿದ ಬಳಿಕ ಆರ್ಯ ಅವರನ್ನು ಗುರಿಯಾಗಿಸುವಂತೆ ಟ್ರೂಡೋ ಅವರಿಗೆ ಒತ್ತಾಯಿಸಿದ್ದರು.

ಚಂದ್ರ ಆರ್ಯ ಅವರ ಪೂರ್ವಜರು ಕರ್ನಾಟಕದವರಾಗಿದ್ದಾರೆ. ಅವರು ಕೆನಡಾದಲ್ಲಿ ನೆಲೆಸಿದ್ದಾರೆ. ಚಂದ್ರ ಆರ್ಯ ಸಂಸದರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಮಯದಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಅಷ್ಟೇ ಅಲ್ಲದೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಹಾಡಿರುವ ಭಾವಗೀತೆಯ ಕೆಲವು ಸಾಲುಗಳನ್ನೂ ಕೂಡ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!