ಹೊಸದಿಗಂತ ವರದಿ ಹುಬ್ಬಳ್ಳಿ :
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ 80 ಅಭ್ಯರ್ಥಿಗಳನ್ನೊಳಗೊಂಡ ಪಟ್ಟಿ ಬಿಡುಗಡೆ ಮಾಡಿದ್ದು, ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ ಎಂದು ಆಪ್ ಜಿಲ್ಲಾಧ್ಯಕ್ಷ ಅನಂತಕುಮಾರ ಬುಗಡಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಪೂರ್ವ ಕ್ಷೇತ್ರಕ್ಕೆ ವಿಕಾಸ ಸೊಪ್ಪಿನ, ಹು-ಧಾ ಪೂರ್ವ ವಿಧಾನ ಸಭಾ ಕ್ಷೇತ್ರಕ್ಕೆ ಬಸವರಾಜ ತೆರದಾಳ ಹಾಗೂ ಕಲಘಟಗಿಗೆ ಮಲ್ಲಿಕಾರ್ಜುನ ಜಕ್ಕಣ್ಣವರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪಕ್ಷದ ಸಿದ್ಧಾಂತದಂತೆ ಮೂರು ಹಂತದ ಸಮೀಕ್ಷೆ ಮಾಡುವ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ಈ ತಿಂಗಳ ಕೊನೆಯ ವಾರದಲ್ಲಿ 2ನೇ ಪಟ್ಟಿ ಬಿಡುಗಡೆ ಮಾಡಲಿದೆ. ಪ್ರಣಾಳಿಕೆಯಲ್ಲಿ ಶೇ. 70 ರಷ್ಟು ಅಂಶಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಸೇರಿಸಲಾಗಿದೆ ಎಂದರು.
ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ವಿಕಾಸ ಸೊಪ್ಪಿನ, ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ನಡೆದ ಕಳಪೆ ಕಾಮಗಾರಿಗಳು, ಎಲ್ ಆಂಡ್ ಟಿ ಕಂಪನಿಯಿಂದ ಸರಿಯಾದ ನಿರ್ವಹಣೆಯಾಗದೆ ಜನರು ಸಮಸ್ಯೆ ಎದುರಿಸುತ್ತಿರುವುದು. ರೈತರ ಬೆಂಬಲ ಬೆಲೆಗೆ ಶಾಶ್ವತ ಖರೀದಿ ಕೇಂದ್ರ ಸ್ಥಾಪನೆ, ಉದ್ಯಮಿಗಳಿಗಿರುವ ಸಮಸ್ಯೆ ಪರಿಹಾರ ಒದಗಿಸುವ ಅಂಶಗಳನಿಟ್ಟುಕೊಂಡು ಚುನಾವಣೆ ಮಾಡಲಾಗುವುದು ಎಂದರು.
ಪೂರ್ವ ಕ್ಷೇತ್ರದ ಅಭ್ಯರ್ಥಿ ಬಸವರಾಜ ತೆರದಾಳ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಪೂರ್ವ ಕ್ಷೇತ್ರದಲ್ಲಿ ಪದವಿ ಕಾಲೇಜ ಸ್ಥಾಪನೆಯಾಗಿಲ್ಲ. 24 ಗಂಟೆ ನೀರು ಸರಬರಾಜು ಆಗುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕಲಘಟಗಿ ಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ಜಕ್ಕಣ್ಣವರ, ಮಲ್ಲಿಕಾರ್ಜುನಯ್ಯ ಹಿರೇಮಠ ಇದ್ದರು.