ಹೊಸದಿಗಂತ ವರದಿ ಬೆಳಗಾವಿ:
ಇಲ್ಲಿನ ದಂಡು ಮಂಡಳಿ(ಕಂಟೋನ್ಮೆಂಟ್ ಬೋರ್ಡ್) ಸಿಇಓ ನಿಗೂಢವಾಗಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಅಕ್ರಮ ನೇಮಕಾತಿ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ದಂಡು ಮಂಡಳಿ ಮೇಲೆ ಸಿಬಿಐ ದಾಳಿ ವಿಚಾರಣೆ ನಡೆಸಿತ್ತು.
ಮೂಲತಃ ತಮಿಳುನಾಡು ರಾಜ್ಯದವರಾದ ಸಿಇಒ ಕೆ. ಆನಂದ ಮೃತಪಟ್ಟಿದ್ದು, ದಂಡು ಮಂಡಳಿಯ ತಮ್ಮ ಸರ್ಕಾರಿ ವಸತಿ ಗೃಹದಲ್ಲಿ ಶನಿವಾರ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಸಾವನ್ನಪ್ಪಿರುವ ಶಂಕೆ ವ್ಯಕ್ತಶಾಗಿದ್ದು, ಎರಡು ದಿನಗಳ ಹಿಂದೆ
ಊಟ ತರಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಶುಕ್ರವಾರ ಮನೆಯ ಬಾಗಿಲು ತೆರದಿರಲಿಲ್ಲ. ಶನಿವಾರವೂ ಬಾಗಿಲು ತೆರೆಯದಾದಾಗ ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿ ಬಂದು ಬಾಗಿಲನ್ನು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಕುರಿತ ಲೇಟರ್ ಸಿಕ್ಕಿಲ್ಲ.
ಘಟನೆ ಕುರಿತು ತಮಿಳುನಾಡಿನ ಅವರ ಕುಟುಂಬಸ್ಥರಿಗೆ ತಿಳಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಜಗದೀಶ್ ತಿಳಿಸಿದ್ದಾರೆ. ಸಿಇಒ ಸರಕಾರಿ ನಿವಾಸದಲ್ಲಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿ ವೈದ್ಯಕೀಯ ವರದಿ ಬಂದ ಮೇಲೆ ಸಂಪೂರ್ಣ ಮಾಹಿತಿ ತಿಳೀಯಲಿದೆ ಎಂದು ಹೇಳಿದ್ದಾರೆ.