ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮುವಿನ ರಜೌರಿಯಲ್ಲು ಉಗ್ರರನ್ನು ಸದೆಬಡಿಯುವ ವೇಳೆ ಹುತಾತ್ಮರಾದ ಕರ್ನಾಟಕ ಮೂಲದ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ.
ವೀರ ಮರಣವನ್ನಪ್ಪಿದ ಯೋಧನಿಗೆ ಕಡೆಯ ನಮನಗಳನ್ನು ಸಲ್ಲಿಸಲು ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ, ಎಲ್ಲೆಡೆ ಅಮರ್ ರಹೇ ಕ್ಯಾಪ್ಟನ್ ಉದ್ಗಾರ ಮೊಳಗಿದೆ.
ಅಂತಿಮ ದರ್ಶನಕ್ಕೂ ಮುನ್ನ ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ಕರ್ನಾಟಕ ಪೊಲೀಸ್ ಹಾಗೂ ಭಾರತೀಯ ಸೇನೆ ಗನ್ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸಲಾಗಿದೆ.
ಜಿಗಣಿಯ ನಂದನವನ ಬಡಾವಣೆಯ ಸ್ವಗೃಹದಲ್ಲಿ ಯೋಧನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.
ಜಿಗಣಿ ಓಟಿಸಿ ಸರ್ಕಲ್, ಬನ್ನೇರುಘಟ್ಟ ರಸ್ತೆ, ನೈಸ್ ರೋಡ್, ಕೋನಪ್ಪನ ಅಗ್ರಹಾರ ಸರ್ಕಲ್ ಮೂಲಕ ಹುತಾತ್ಮ ಯೋಧನ ಅಂತಿಮ ಯಾತ್ರೆ ಸಾಗಿದ್ದು, ರಸ್ತೆಯುದ್ದಕ್ಕೂ ಜನರು ಅಮರ್ ರಹೇ ಕ್ಯಾಪ್ಟನ್ ಎಂದು ಘೋಷಣೆ ಕೂಗಿದ್ದಾರೆ.
ಸಕಲ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಕ್ಯಾಪ್ಟನ್ ಅಂತ್ಯಸಂಸ್ಕಾರ ಸೋಮಸುಂದರ ಪಾಳ್ಯ ಚಿತಾಗಾರದಲ್ಲಿ ನಡೆಯಲಿದೆ.